ಅಖಿಲ ಭಾರತ ಸಾರ್ವತ್ರಿಕ ಮುಷ್ಕರ: ಎರಡನೇ ದಿನ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ
ಬಸ್ಗಳಿಗೆ ಕಲ್ಲುತೂರಾಟ, 60 ಕ್ಕೂ ಅಧಿಕ ಬಸ್ಗಳು ಜಖಂ
#ಬಸ್ ಸಂಚಾರದಲ್ಲಿ ವ್ಯತ್ಯಯ, ಸಾರ್ವಜನಿಕರ ಪರದಾಟ
ಬೆಂಗಳೂರು, ಜ.9: ಕೇಂದ್ರ ಸರಕಾರದ ಕಾರ್ಮಿಕ ನೀತಿಯನ್ನು ವಿರೋಧಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಹುತೇಕ ಕಾರ್ಮಿಕರು ಬೀದಿಗಿಳಿದು ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯಾದ್ಯಂತ ಮೊದಲನೇ ದಿನ ಸಾಂಕೇತಿಕ ಪ್ರತಿಭಟನೆಗೆ ಸೀಮಿತವಾಗಿದ್ದ ಮುಷ್ಕರ, ಎರಡನೇ ದಿನ ಎಲ್ಲ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಮಟ್ಟದಲ್ಲಿ ಕಾರ್ಮಿಕರು ಬೀದಿಗಿಳಿದ್ದರು. ಹೀಗಾಗಿ, ರಾಜ್ಯಾದ್ಯಂತ ಬಹುತೇಕ ಎಲ್ಲ ಕಾರ್ಖಾನೆಗಳು ಸ್ಥಗಿತಗೊಂಡಿದ್ದವು. ಅಲ್ಲದೆ, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಬಿಸಿಯೂಟ ನೌಕರರು, ಗ್ರಾಮ ಪಂಚಾಯತ್ ನೌಕರರು ಸೇರಿದಂತೆ ವಿವಿಧ ವಲಯಗಳಲ್ಲಿ ದುಡಿಯುತ್ತಿರುವ ಸಾವಿರಾರು ಮಂದಿ ಬೀದಿಗಿಳಿದು ಎರಡು ದಿನಗಳ ಕಾಲ ಮುಷ್ಕರದಲ್ಲಿ ಪಾಲ್ಗೊಳ್ಳುವ ಮೂಲಕ ಕೇಂದ್ರ ಸರಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ.
ಇನ್ನುಳಿದಂತೆ ಮೊದಲ ದಿನ ಮುಷ್ಕರದಲ್ಲಿ ಪಾಲ್ಗೊಳ್ಳುವ ಮೂಲಕ ಬೆಂಬಲ ಸೂಚಿಸಿದ್ದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ), ಕೆಎಸ್ಸಾರ್ಟಿಸಿ ಹಾಗೂ ಮತ್ತಿತರೆ ವಲಯದ ಸಾರಿಗೆ ವಾಹನಗಳು ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಎಂದಿನಂತೆ ಸಂಚಾರ ಮಾಡಿದವು. ಆದರೆ, ಬೆಂಗಳೂರು ನಗರದಲ್ಲಿ ಬಸ್ಗಳಿಗೆ ಕಲ್ಲು ಎಸೆದಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಬಿಎಂಟಿಸಿ ಬಸ್ಗಳ ಸಂಚಾರವನ್ನು ಮಧ್ಯಾಹ್ನದವರೆಗೂ ಸ್ಥಗಿತಗೊಳಿಸಲಾಗಿತ್ತು. ರಾಯಚೂರು ಹಾಗೂ ಬಳ್ಳಾರಿಯಲ್ಲಿ ಸರಕಾರಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದು ಹೊರತುಪಡಿಸಿ, ಉಳಿದ ಎಲ್ಲ ಕಡೆಗಳಲ್ಲಿ ಎಂದಿನಂತೆ ಶಾಲಾ-ಕಾಲೇಜುಗಳು ನಡೆದಿವೆ. ತುಮಕೂರು, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಹೊಸಕೋಟೆ, ನೆಲಮಂಗಲ, ಹಾಸನ, ದಾವಣಗೆರೆ, ಶಿವಮೊಗ್ಗ, ಕಾರವಾರ, ಮೈಸೂರು, ಹುಬ್ಬಳ್ಳಿ, ಕಲಬುರಗಿ, ಬೆಳಗಾವಿ, ಗದಗ, ಮಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಮಿಕರು ಪ್ರತಿಭಟನೆ ನಡೆಸುವ ಮೂಲಕ ಮುಷ್ಕರವನ್ನು ಯಶಸ್ವಿಗೊಳಿಸಿದ್ದಾರೆ.
ಬಸ್ಗಳ ಮೇಲೆ ಕಲ್ಲುತೂರಾಟ: ಮುಷ್ಕರದ ಅಂಗವಾಗಿ ವಿವಿಧ ಕಡೆಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಸರಕಾರಿ ಬಸ್ಗಳ ಮೇಲೆ ಕೆಲವು ಕಿಡಿಗೇಡಿಗಳು ಕಲ್ಲುತೂರಾಟ ನಡೆಸಿದ್ದರಿಂದ ಬಸ್ಗಳು ಜಖಂಗೊಂಡಿವೆ. ರಾಮನಗರದಲ್ಲಿ 5, ಬಳ್ಳಾರಿಯಲ್ಲಿ 4, ನೆಲಮಂಗಲದಲ್ಲಿ 4, ಬೆಂಗಳೂರು ನಗರದಲ್ಲಿ 12 ಕ್ಕೂ ಅಧಿಕ ಕೆಎಸ್ಸಾರ್ಟಿಸಿ ಬಸ್ಗಳ ಮೇಲೆ ಕಲ್ಲು ಎಸೆದಿದ್ದಾರೆ. ಅಲ್ಲದೆ, ಬೆಂಗಳೂರು ನಗರದ ಸುಮಾರು 47 ಕ್ಕೂ ಅಧಿಕ ಬಿಎಂಟಿಸಿ ಬಸ್ಗಳ ಮೇಲೆ ಕಲ್ಲುತೂರಾಟ ನಡೆಸಲಾಗಿದೆ. ಈ ಸಂದರ್ಭದಲ್ಲಿ ಬಿಎಂಟಿಸಿ ವೋಲ್ವಾ ಬಸ್ನ ಚಾಲಕರೊಬ್ಬರಿಗೆ ಕಣ್ಣಿಗೆ ಗಂಭೀರ ಗಾಯವಾಗಿದ್ದು, ನಗರದ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅಡಕಮಾರನಹಳ್ಳಿ, ಜಾಲಹಳ್ಳಿ, ವಿಮಾನ ನಿಲ್ದಾಣ ಸೇರಿದಂತೆ ಮತ್ತಿತರೆ ಕಡೆಗಳಲ್ಲಿ ಕಲ್ಲುತೂರಾಟ ನಡೆದಿದೆ ಎಂದು ವರದಿಯಾಗಿದೆ.
50 ಲಕ್ಷ ಕಾರ್ಮಿಕರು ಭಾಗಿ
ಎರಡು ದಿನಗಳ ಕಾಲ ನಡೆದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದಲ್ಲಿ ದೇಶದಲ್ಲಿ ಸುಮಾರು 20 ಕೋಟಿ ಕಾರ್ಮಿಕರು ಪಾಲ್ಗೊಂಡಿದ್ದರೆ, ಕರ್ನಾಟಕದಲ್ಲಿ 50 ಲಕ್ಷ ಕಾರ್ಮಿಕರು ಮುಷ್ಕರದಲ್ಲಿ ಭಾಗಿಯಾಗುವ ಮೂಲಕ ಐತಿಹಾಸಿಕ ದಾಖಲೆ ಬರೆದಿದ್ದಾರೆ.
-ಎಸ್.ವರಲಕ್ಷ್ಮಿ, ಸಿಐಟಿಯು ರಾಜ್ಯಾಧ್ಯಕ್ಷೆ
ಕೇಂದ್ರ ಸರಕಾರ ಭಾರತದ 120 ಕೋಟಿ ಜನರನ್ನು ಹಾಗೂ ದೇಶದ ಸಂಪನ್ಮೂಲವನ್ನು ವಿದೇಶಿ ಗುತ್ತಿಗೆದಾರರಿಗೆ ಒತ್ತೆ ಇಡಲು ಮುಂದಾಗಿದೆ. ಇದನ್ನು ಖಂಡಿಸಿ ಈ ಹಿಂದೆ ಹಲವು ಮುಷ್ಕರಗಳು ನಡೆದಿವೆ. ಆದರೂ, ಈ ಮುಷ್ಕರ ಅತ್ಯಂತ ಮಹತ್ವ ಪಡೆದುಕೊಂಡಿದ್ದು, ಕೋಟ್ಯಂತರ ಕಾರ್ಮಿಕರು ಇದಕ್ಕೆ ಬೆಂಬಲ ನೀಡಿದ್ದಾರೆ.
-ಎಚ್.ವಿ.ಅನಂತಸುಬ್ಬರಾವ್, ಎಐಟಿಯುಸಿ ಅಧ್ಯಕ್ಷ