ಜಾತಿ ವಿಷ ಬೀಜ ಬಿತ್ತುವವರು ವೀರಶೈವರು: ಮಾತೆ ಮಹಾದೇವಿ
"ಶಾಮನೂರು ಶಿವಶಂಕರಪ್ಪ ಬಾಲಿಶ ಮಾತುಗಳನ್ನು ಆಡಬಾರದು"
ಬಾಗಲಕೋಟೆ, ಜ.13: ಗೃಹ ಸಚಿವ ಎಂ.ಬಿ.ಪಾಟೀಲ್ ಅವರು ತಮ್ಮ ಕೆಲಸದಿಂದಲೇ ಮತ್ತೆ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಹೀಗಾಗಿ, ಹಿರಿಯರಾದ ಶಾಮನೂರು ಶಿವಶಂಕರಪ್ಪ ಅವರು ತೂಕದ ಮಾತುಗಳನ್ನು ಆಡಬೇಕು, ಬಾಲಿಶ ಮಾತುಗಳನ್ನು ಆಡಬಾರದು ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಹೇಳಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ ವೀರಶೈವರು ಎಂ.ಬಿ.ಪಾಟೀಲರನ್ನು ಸೋಲಿಸುವುದಕ್ಕೆ ಪ್ರಯತ್ನ ಮಾಡಿದ್ದರು. ಅವರನ್ನ ಸೋಲಿಸಲು ಎಷ್ಟೇ ಪ್ರಯತ್ನಗಳು ನಡೆದರೂ ಗೆದ್ದು ಬಂದಿದ್ದಾರೆ. ಇದಕ್ಕೆ ಕಾರಣ ಅವರು ಮಾಡಿರುವ ಸಾಧನೆ. ಇದನ್ನ ಶಾಮನೂರು ಶಿವಶಂಕರಪ್ಪ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ನಾವು ಯಾರಿಗೂ ವಿಷ ಬೀಜ ಬಿತ್ತುತ್ತಿಲ್ಲ. ಲಿಂಗಾಯತ ಧರ್ಮ ನಮ್ಮ ಹಕ್ಕು, ಅದನ್ನು ನಾವು ಕೇಳುತ್ತಿದ್ದೇವೆ. ಜಾತಿ ವಿಷ ಬೀಜ ಬಿತ್ತುತ್ತಿರೋರು ವೀರಶೈವರು. ಶ್ಯಾಮನೂರು ಶಿವಶಂಕರಪ್ಪ ಹಗುರವಾಗಿ ಮಾತಬಾಡಬಾರದು. ಪಂಚಪೀಠಾಧೀಶ್ವರರು ವೀರಶೈವ ಜಾತಿಯನ್ನು ಪರಿಶಿಷ್ಟ ಜಾತಿಗೆ ಸೇರಿಸಿ ಎಂದು ಹೋರಾಟ ನಡೆಸಿದ್ದರು. ಪಂಚಪೀಠಾಧೀಶ್ವರರಿಗೆ, ವೀರಶೈವವಾದಿಗಳಿಗೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದರು. ಬಿ.ಎಸ್.ಯಡಿಯೂರಪ್ಪ, ಲಿಂಗಾಯತ ಹಣೆಪಟ್ಟಿಕಟ್ಟಿಕೊಂಡು ಆಯ್ಕೆಯಾಗಿದ್ದಾರೆ. ನಮ್ಮ ನಾಯಕರು ಯಡಿಯೂರಪ್ಪ, ಆದರೆ ಹೋರಾಟಕ್ಕೆ ಸಾಥ್ ನೀಡದಿರೋದು ಬೇಸರ ತರಿಸಿದೆ. ಬಿಜೆಪಿ ಪಕ್ಷದಲ್ಲಿನ ಯಾವುದೇ ಬಿಜೆಪಿ ಎಂಪಿಗಳು ಲಿಂಗಾಯತ ಅಲ್ಪಸಂಖ್ಯಾತ ಮಾನ್ಯತೆಗಾಗಿ ಧ್ವನಿ ಎತ್ತುತ್ತಿಲ್ಲ, ಇದು ಬೇಸರ ತರಿಸಿದೆ ಎಂದರು.