ಕಾಫಿ ಬೆಳೆ ಸಮಸ್ಯೆಗೆ ಪರಿಹಾರ: ಕೇಂದ್ರದ ಬಳಿ ಪಕ್ಷಾತೀತ ನಿಯೋಗ ಕೊಂಡೊಯ್ಯುವ ಭರವಸೆ ನೀಡಿದ ಸಚಿವ ಜಾರ್ಜ್
ಚಿಕ್ಕಮಗಳೂರಿನಲ್ಲಿ ಕಾಫಿ ಕೃಷಿ ಮೇಳ-2019
ಚಿಕ್ಕಮಗಳೂರು, ಜ.15: ದೇಶದ ಬೊಕ್ಕಸಕ್ಕೆ ಸಾಕಷ್ಟು ವಿದೇಶಿ ವಿನಿಮಯ ತಂದುಕೊಡುತ್ತಿರುವ ಕಾಫಿ ಉದ್ಯಮ ಹವಮಾನ ವೈಪರೀತ್ಯ, ಬೆಲೆ ಏರಿಳಿತ, ಅತಿವೃಷ್ಟಿಯಿಂದಾಗಿ ಸಂಕಷ್ಟದ ದಿನಗಳನ್ನು ಎದುರಿಸುತ್ತಿದೆ. ಕಾಫಿ ಹಾಗೂ ಕಾಫಿ ಉತ್ಪನ್ನಗಳಿಗೆ ಸರಿಯಾದ ಬೆಲೆ ಸಿಕ್ಕರೆ ಉದ್ಯಮದ ಸಾಕಷ್ಟು ಸಮಸ್ಯೆ ಪರಿಹಾರವಾಗುತ್ತದೆ. ಇದಕ್ಕೆ ಸ್ಪಂದಿಸುವುದು ರಾಜ್ಯ ಸರಕಾರದ ಹಾಗೂ ಜನಪ್ರತಿನಿಧಿಗಳ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರದ ಬಳಿ ಪಕ್ಷಾತೀತವಾದ ನಿಯೋಗವೊಂದನ್ನು ಕೊಂಡೊಯ್ಯಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಭರವಸೆ ನೀಡಿದ್ದಾರೆ.
ಮಂಗಳವಾರ ನಗರದ ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾಫಿ ಸಮ್ಮೇಳನ ಹಾಗೂ ಕಾಫಿ ಕೃಷಿ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಯಥೇಚ್ಛವಾಗಿ ಕಾಫಿ ಬೆಳೆಯಲಾಗುತ್ತಿದೆ. ಕಾಫಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ. ಆದರೆ ಕೇಂದ್ರ ಕೆಲ ವಾಣಿಜ್ಯ ನೀತಿಗಳು ಕಾಫಿ ಬೆಳೆಗಾರರಿಗೆ ಮಾರಕವಾಗಿದೆ. ಅಲ್ಲದೇ ಹವಾಮಾನ ವೈಫರೀತ್ಯ ಇಡೀ ಉದ್ಯಮಕ್ಕೆ ಸವಾಲಾಗಿದೆ.
ಜೊತೆಗೆ ಕಳೆದ ಎರಡು ದಶಕಗಳಿಂದ ಕಾಫಿ, ಕಾಳು ಮೆಣಸು ಧಾರಣೆ ನಿರಂತರವಾಗಿ ಕುಸಿಯುತ್ತಿದೆ. ಅರೇಬಿಕಾ ಕಾಫಿ ಕಾಂಡಕೊರಕದ ಹಾವಳಿಯಿಂದ ತೋಟಗಳೇ ನಾಶವಾಗುತ್ತಿದ್ದು, ಸಕಾಲದಲ್ಲಿ ಕಾರ್ಮಿಕರ ಅಲಭ್ಯತೆಯಂತಹ ಸಮಸ್ಯೆಗಳಿಂದಾಗಿ ಮೂರು ಜಿಲ್ಲೆಗಳ ಕಾಫಿ ಉದ್ಯಮ ಪ್ರಸಕ್ತ ಸಂಕಷ್ಟದ ದಿನಗಳನ್ನು ಎದುರಿಸುತ್ತಿದೆ ಎಂದ ಅವರು, ಉದ್ಯಮದ ಸಂಕಷ್ಟದ ಬಗ್ಗೆ ರಾಜ್ಯ ಸರಕಾರಕ್ಕೆ ಅರಿವಿದ್ದು, ಸಮಸ್ಯೆಗಳ ಪರಿಹಾರಕ್ಕೆ ರಾಜ್ಯ ಸರಕಾರ ಬದ್ಧವಾಗಿದೆ. ಉದ್ಯಮದ ಸಮಸ್ಯೆಗಳ ಬಗ್ಗೆ ಕೇಂದ್ರದ ಗಮನಸೆಳೆಯುವ ನಿಟ್ಟಿನಲ್ಲಿ ಶೀಘ್ರ ಕೇಂದ್ರದ ಹಣಕಾಸು ಸಚಿವರಲ್ಲಿಗೆ ಪಕ್ಷಾತೀತವಾದ ನಿಯೋಗವೊಂದನ್ನು ಕೊಂಡೊಯ್ದು ಕಾಫಿ ಉದ್ಯಮ ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಒತ್ತಡ ತರಲಾಗುವುದು ಎಂದು ಸಚಿವ ಜಾರ್ಜ್ ತಿಳಿಸಿದರು.
ಕಾಫಿ ಉದ್ಯಮಕ್ಕೆ ಸವಾಲಾಗಿರುವ ಬೋರರ್ ನಿಯಂತ್ರಣಕ್ಕೆ ಸೂಕ್ತ ಔಷಧ ಕಂಡು ಹಿಡಿಯಲು ರಾಜ್ಯ ಸರಕಾರ ಸಂಶೋಧಕರಿಗೆ ಸೂಚಿಸಿದೆ. ರಾಜ್ಯ ಸರಕಾರ ಸಾಲಮನ್ನಾದಂತಹ ನಿರ್ಧಾರ ತೆಗೆದುಕೊಳ್ಳುವ ಮೂಲಕ ಸಮಸ್ಯೆಗೆ ಸ್ಪಂದಿಸುತ್ತಲೇ ಇದೆ. ಕಾಫಿ ಬೆಳೆಗಾರರ ಸಮಸ್ಯೆ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗಿದೆ. ಸಿಎಂ ಇದಕ್ಕೆ ಸ್ಪಂದಿಸಿದ್ದಾರೆ. ಕೇಂದ್ರಕ್ಕೆ ನಿಯೋಗವೊಂದನ್ನು ಕೊಂಡೊಯ್ಯುವ ಭರವಸೆ ನೀಡಿದ್ದಾರೆ ಎಂದ ಅವರು, ಕಾಫಿ ಬ್ರಾಂಡ್ಗಳನ್ನು ಪರಿಚಯಿಸಲು ವಿಮಾನ ನಿಲ್ದಾಣಗಳಲ್ಲಿ ಅಗತ್ಯ ಸ್ಥಳಾವಕಾಶವನ್ನು ಮಾಡಿಕೊಡುವುದಾಗಿ ಕೇಂದ್ರದ ಕೈಗಾರಿಕಾ ಮತ್ತು ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು ಅವರು ತಮಗೆ ಭರವಸೆ ನೀಡಿದ್ದಾರೆ ಎಂದರು.
ಕಾಫಿ ಮೇಳದಿ ಹಿಲ್ ಬೀನ್ ಬ್ರಾಂಡೆಡ್ ಕಾಫಿ ಪುಡಿಯನ್ನು ಬಿಡುಗಡೆ ಮಾಡಿ ಮಾತನಾಡಿದ ವಿಧಾನ ಪರಿಷತ್ ಉಪ ಸಭಾಪತಿ ಧರ್ಮೇಗೌಡ, ಸಮ್ಮಿಶ್ರ ಸರಕಾರದ ಸಾಲ ಮನ್ನಾ ಯೋಜನೆಯಡಿಯಲ್ಲಿ ಕಾಫಿ ಬೆಳೆಯುವ ಮೂರೂ ಜಿಲ್ಲೆಗಳ ಬೆಳೆಗಾರರಿಗೆ ಒಟ್ಟು 870 ಕೋಟಿ ರೂ. ಮನ್ನಾ ಆಗಲಿದೆ ಎಂದರು.
ಶಾಸಕ ಸಿ.ಟಿ.ರವಿ ರೈತ ಸ್ನೇಹಿ ವೈಬ್ಸೈಟ್ಗೆ ಚಾಲನೆ ನೀಡಿ ಮಾತನಾಡಿದರು. ಕೆಜಿಎಫ್ ಅಧ್ಯಕ್ಷ ಬಿ.ಎಸ್.ಜೈಯರಾಮ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಆರಂಭದಲ್ಲಿ ಸಚಿವ ಜಾರ್ಜ್ ಅವರು ಸಮ್ಮೇಳನದ ಅಂಗವಾಗಿ ಏರ್ಪಡಿಸಲಾಗಿದ್ದ ಕೃಷಿ ಸಲಕರಣೆಗಳ ವಸ್ತು ಪ್ರದರ್ಶನ ಉದ್ಘಾಟಿಸಿದರು. ವಿಪ ಸದಸ್ಯರಾದ ಎಂ.ಕೆ.ಪ್ರಾಣೇಶ್, ಎಸ್.ಎಲ್ ಬೋಜೇಗೌಡ, ಮಾಜಿ ಕೇಂದ್ರ ಸಚಿವೆ ಡಿ.ಕೆ.ತಾರಾದೇವಿ, ಕೋಮಾರ್ಕ್ ಅಧ್ಯಕ್ಷ ಎ.ಎಲ್.ಶಿವು, ಕಾಫಿ ಮಂಡಳಿ ಅಧ್ಯಕ್ಷ ಬೋಜೇಗೌಡ, ಮಾಜಿ ಶಾಸಕರಾದ ಬಿ.ಬಿ.ನಿಂಗಯ್ಯ, ಡಿ.ಎನ್.ಜೀವರಾಜ್, ಸಕಲೇಶಪುರ ವಿಶ್ವನಾಥ್, ಮೋಟಮ್ಮ, ಗಾಯತ್ರಿ ಶಾಂತೇಗೌಡ, ಬಿ.ಎಲ್.ಶಂಕರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಿ.ಎಲ್.ವಿಜಯಕುಮಾರ್, ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಉಪಸ್ಥಿತರಿದ್ದರು.
ಕಾಫಿ ಬೆಳೆಗಾರರು ಒತ್ತುವರಿ ಮಾಡಿರುವ 10 ಎಕರೆ ವರೆಗಿನ ಕಂದಾಯ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ಬೆಳೆಗಾರರಿಗೆ ನೀಡುವ ಕುರಿತು ಸಿದ್ದರಾಮಯ್ಯ ನೇತೃತ್ವದ ಸರಕಾರ ನಿರ್ಣಯ ಕೈಗೊಂಡಿದೆ. ಸಮ್ಮಿಶ್ರ ಸರಕಾರ ಇದರ ಜಾರಿಗೆ ಚಿಂತನೆ ನಡೆಸಿದೆ. ಈ ಸಂಬಂಧ ಸರಕಾರದ ಮೇಲೆ ಒತ್ತಡ ತರುವ ಕೆಲಸ ಮೂರು ಜಿಲ್ಲೆಗಳ ಶಾಸಕರು, ಬೆಳೆಗಾರರು ಮಾಡಬೇಕು.
- ಕೆ.ಜೆ.ಜಾರ್ಜ್, ಉಸ್ತುವಾರಿ ಸಚಿವಯುಪಿಎ ಸರಕಾರದ ಅವಧಿಯಲ್ಲಿ ಕಾಫಿ ಬೆಳೆಗಾರರು ಸಂಕಷ್ಟದಲ್ಲಿದ್ದಾಗ ಪರಿಹಾರದ ಪ್ಯಾಕೇಜ್ ನೀಡಿತ್ತು. ಅದೇ ರೀತಿ ಕೇಂದ್ರ ಸರಾಕರ ಇಂತಹ ಯೋಜನೆಗಳ ಜಾರಿಗೆ ಮುಂದಾಗಿ ಉದ್ಯಮದ ಉಳಿವಿಗೆ ನೆರವು ನೀಡಬೇಕು. ಕಾಳು ಮೆಣಸು ಆಮದು ನಿಯಂತ್ರಣಕ್ಕೆ ಕೇಂದ್ರ ಸರಕಾರ ಕಡಿವಾಣ ಹಾಕಬೇಕು.
- ಟಿ.ಡಿ.ರಾಜೇಗೌಡ, ಶಾಸಕ