ಮಂಡ್ಯ: ಈಜಲು ತೆರಳಿದ್ದ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಮೃತ್ಯು
ಮಂಡ್ಯ,ಜ.16: ಶ್ರೀರಂಗಪಟ್ಟಣ ತಾಲೂಕಿನ ಕಾರೇಕುರ ಗ್ರಾಮದ ಕಾವೇರಿ ನದಿಯಲ್ಲಿ ತನ್ನ ಸಹಪಾಠಿಗಳೊಂದಿಗೆ ಈಜಲು ಬಂದಿದ್ದ ವಿದ್ಯಾರ್ಥಿಯೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಮೈಸೂರು ನಗರದ ಮೇಟಗಳ್ಳಿಯ ಬಡಾವಣೆ ನಿವಾಸಿ ರಘುರಾಮ್ ಎಂಬವರ ಪುತ್ರ ಹೇಮಂತ್ (21) ಮೃತ ವಿದ್ಯಾರ್ಥಿ. ಈತ ಬೆಳವಾಡಿಯಲ್ಲಿರುವ ಎಂಐಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ 3ನೇ ವರ್ಷದ ಬಿ.ಇ ವ್ಯಾಸಂಗ ಮಾಡುತ್ತಿದ್ದು, ಬುಧವಾರ ತನ್ನ ಸಹಪಾಠಿಗಳಾದ ಕೌಶಿಕ್, ಮನೋಜ್ ಹಾಗೂ ಲೋಕರಂಜನ್ ಎಂಬವರ ಜೊತೆ ಕಾರೇಕುರ ಗ್ರಾಮದ ನಿರ್ಜನ ಪ್ರದೇಶದ ದ್ವೀಪಕ್ಕೆ ಆಗಮಿಸಿ ಈಜಲು ಕಾವೇರಿ ನದಿಗೆ ಇಳಿದಿದ್ದಾರೆ. ಈ ವೇಳೆ 4 ಜನರು ನೀರಿನ ಸುಳಿಗೆ ಸಿಲುಕಿದ್ದು, ಮೂವರು ಬದುಕುಳಿದು ಹೊರಬಂದಿದ್ದು, ಹೇಮಂತ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ವಿಷಯ ತಿಳಿದು ಸ್ಥಳಿಯ ಗ್ರಾಮಸ್ಥರು ಹುಡುಕಾಟ ಆರಂಭಿಸಿದ್ದು, ಬಳಿಕ ಸ್ಥಳಕ್ಕೆ ಶ್ರೀರಂಗಪಟ್ಟಣ ಟೌನ್ ಠಾಣೆ ಪೊಲೀಸರು ಹಾಗೂ ಆಗ್ನಿಶಾಮಕ ದಳದ ಸಿಬ್ಬಂದಿ ನದಿಯಲ್ಲಿ ಹುಡಕಾಟ ಆರಂಭಿಸಿದ್ದಾರೆ. ಶೋಧ ಕಾರ್ಯ ಮುಂದುವರೆದಿದ್ದು, ಈ ಸಂಬಂಧ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.