ವ್ಯಕ್ತಿಯ ಕೊಲೆ ಪ್ರಕರಣ: ಪತ್ನಿ, ಪ್ರಿಯಕರನ ಬಂಧನ
ಕೋಲಾರ,ಜ.17: ಪ್ರಿಯಕರನೊಂದಿಗೆ ಸೇರಿ ಗಂಡನನ್ನು ಕೊಲೆ ಮಾಡಿದ್ದ ವಿವಾಹಿತ ಯುವತಿಯನ್ನು ಕೋಲಾರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈ ಬಂಧನದೊಂದಿಗೆ ನಿಗೂಢ ಕೊಲೆ ರಹಸ್ಯವನ್ನು ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೋಲಾರ ನಗರದ ಷಾಹಿನ್ ಷಾ ನಗರದಲ್ಲಿ ಉತ್ತರ ಪ್ರದೇಶದ ಶ್ಯಾಮಲಿ ಜಿಲ್ಲೆಯ ಕೈರಾನ ಗ್ರಾಮದ 30 ವರ್ಷದ ಸಾಜಿದ್ ಕ್ಷೌರಿಕ ಅಂಗಡಿ ನಡೆಸುತ್ತಿದ್ದರು. ಆತನ ಹೆಂಡತಿ ಶಭಾನ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸ ಮಾಡುತ್ತಿದ್ದರು. ಕಳೆದ ಡಿಸೆಂಬರ್ 28 ರಂದು ತನ್ನ ಗಂಡ ಸಾಜಿದ್ ನನ್ನು ಮಲಗಿದ್ದಾಗ ಎಬ್ಬಿಸಿ ಹೊರಗೆ ಕರೆದೊಯ್ದು ಕುತ್ತಿಗೆ ಮತ್ತು ಎದೆಯ ಮೇಲೆ ಕೊಯ್ದು ಕೊಲೆ ಮಾಡಿ ಶವವನ್ನು ಮನೆಯ ಮುಂದೆ ಎಸೆದು, ಪರಾರಿಯಾಗಿದ್ದಾರೆ ಎಂದು ನಾಟಕವಾಡಿ ಮೃತನ ಪತ್ನಿ ಶಬಾನ ಕೋಲಾರ ನಗರ ಪೊಲೀಸರಿಗೆ ದೂರು ನೀಡಿದ್ದಳು.
ಶಬಾನ ತನ್ನ ಚಿಕ್ಕಮ್ಮನ ಮಗ ಸಮೀರ್ ನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದ್ದು, ಪ್ರದೇಶದ ಶಹರಾನ್ಪುರ ಜಿಲ್ಲೆಯ ರಾಮಾಪುರ ಮನಿಹರನ್ ಗ್ರಾಮದ ನಿವಾಸಿಯಾಗಿದ್ದ ಆತ ಶಭಾನ ಜೊತೆಗೂಡಿ ಸಾಜಿದ್ ನನ್ನು ಕತ್ತು ಹಿಸುಕಿ ತಲೆ ದಿಂಬು ಮತ್ತು ಕಂಬಳಿಯಿಂದ ಉಸಿರು ಕಟ್ಟಿಸಿ ಕೊಲೆ ಮಾಡಿದ್ದರು. ಬಳಿಕ ಪೊಲೀಸರ ದಿಕ್ಕು ತಪ್ಪಿಸಲು ಯಾರೋ ಕೊಲೆ ಮಾಡಿರುವುದಾಗಿ ನಾಟಕವಾಡಿದ್ದರು.
ಕೋಲಾರ ಪೊಲೀಸ್ ವೃತ್ತ ನಿರೀಕ್ಷಕ ಎಂ.ಜಿ ಫಾರೂಖ್ ಪಾಷಾ, ಸಬ್ ಇನ್ಸ್ಪೆಕ್ಟರ್ ಅಣ್ಣಯ್ಯ, ಅಪರಾಧದಳ ಪೇದೆಗಳಾದ ಹಮೀದ್ ಖಾನ್, ಜಿ.ವಿ ರಾಘವೇಂದ್ರ, ಕೆಎ ನರೇಂದ್ರ, ಎ ರಮೇಶ್, ಆಂಜನಪ್ಪ ಹಾಗು ಗುರುಪ್ರಸಾದ್ ಹಾಗು ಮಹಿಳಾ ಪೇದೆ ಆರತಿ ಆರೋಪಿಗಳನ್ನು ಬಂಧಿಸಿ ಕೊಲೆಯ ರಹಸ್ಯವನ್ನು ಭೇದಿಸಿರುವುದಾಗಿ ಎಸ್ ಪಿ ಡಾ.ರೋಹಿಣಿ ಕಠೋಚ್ ತಿಳಿಸಿದ್ದಾರೆ. ಆರೋಪಿಗಳನ್ನು ಬುಧವಾರ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಯಿತು.