ಆಪರೇಷನ್ ಭೀತಿಯಿಂದ ಶಾಸಕರು ರೆಸಾರ್ಟ್ಗೆ: ಕಂದಾಯ ಸಚಿವ ಆರ್.ವಿ.ದೇಶಪಾಂಡೆ
ಹುಬ್ಬಳ್ಳಿ, ಜ. 19: ‘ನಮ್ಮ ಪಕ್ಷದ ಶಾಸಕರ ಬಗ್ಗೆ ನಮಗೆ ಸಂಪೂರ್ಣ ವಿಶ್ವಾಸವಿದೆ. ಆದರೆ, ಬಿಜೆಪಿಯವರು ನಮ್ಮ ಶಾಸಕರನ್ನು ಸೆಳೆಯಲು ಯತ್ನಿಸುತ್ತಿರುವುದರಿಂದ ರೆಸಾರ್ಟ್ನಲ್ಲಿ ಇರಿಸಲಾಗಿದೆ’ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ನಮ್ಮ ಪಕ್ಷದ ಶಾಸಕರಿಗೆ ಬಿಜೆಪಿ ಮುಖಂಡರು ಆಮಿಷವೊಡ್ಡುತ್ತಿದ್ದು, ಒತ್ತಡ ಹೇರುತ್ತಿದ್ದಾರೆ. ಹೀಗಾಗಿ ನಮ್ಮ ಪಕ್ಷದ ಶಾಸಕರು ನಿನ್ನೆಯೇ ರೆಸಾರ್ಟ್ಗೆ ತೆರಳಿದ್ದಾರೆ ಎಂದು ಇದೇ ವೇಳೆ ತಿಳಿಸಿದರು.
ಬರ ಪರಿಹಾರಕ್ಕೆ ಹಣ ಬಿಡುಗಡೆ: ರಾಜ್ಯದಲ್ಲಿನ 156 ತಾಲೂಕುಗಳನ್ನು ಈಗಾಗಲೇ ಬರ ಪೀಡಿತ ಎಂದು ಘೋಷಿಸಿದ್ದು, ಕುಡಿಯುವ ನೀರು, ಪಶುಗಳಿಗೆ ಮೇವು ಒದಗಿಸಲು ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ದೇಶಪಾಂಡೆ ಹೇಳಿದರು.
ಬರ ಪರಿಸ್ಥಿತಿ, ಪರಿಹಾರ ಕಾರ್ಯಗಳ ಅಧ್ಯಯನಕ್ಕೆ ಸಚಿವ ಸಂಪುಟ ಉಪ ಸಮಿತಿಯ ನಾಲ್ಕು ತಂಡ ರಚನೆ ಮಾಡಿದ್ದು, ಈಗಾಗಲೇ ರಾಜ್ಯದಾದ್ಯಂತ ಪ್ರವಾಸ ಮಾಡಲಾಗುತ್ತಿದೆ. ಈ ಹಿಂದೆಯೇ ಬರ ಪೀಡಿತ ಘೋಷಣೆಯಾದ ತಾಲೂಕುಗಳಿಗೆ ಈಗಾಗಲೇ 1ಕೋಟಿ ರೂ.ಹಣ ಬಿಡುಗಡೆ ಮಾಡಲಾಗಿದೆ.
ಕುರಿ ಅಭಿವೃದ್ಧಿ ನಿಗಮದಿಂದ 5ಕೋಟಿ ರೂ.ಬರ ಪರಿಹಾರ ಕಾಮಗಾರಿಗೆ ನೀಡಲಾಗಿದೆ. 15 ಲಕ್ಷ ಮೇವು ಕಿಟ್ ವಿತರಿಸಲಾಗಿದೆ. ಬರ ಪೀಡಿತವಲ್ಲದ ತಾಲೂಕುಗಳಿಗೂ ಕುಡಿಯುವ ನೀರಿಗಾಗಿ 15ಲಕ್ಷ ರೂ.ನೀಡಲಾಗಿದೆ ಎಂದು ಮಾಹಿತಿ ನೀಡಿದರು.