ಬಿಜೆಪಿ ಶಾಸಕರು ರೆಸಾರ್ಟ್ನಿಂದ ಹೊರಬಂದ ಬಳಿಕ ನಮ್ಮ ಆಟ ಶುರು: ಸಚಿವ ಸಾ.ರಾ. ಮಹೇಶ್
"ಬಿಜೆಪಿಯ 6 ಮಂದಿ ಶಾಸಕರು ನಿರಂತರ ನಮ್ಮ ಸಂಪರ್ಕದಲ್ಲಿದ್ದಾರೆ"
ಮೈಸೂರು,ಜ.19: ರೆಸಾರ್ಟ್ನಲ್ಲಿರುವ ಬಿಜೆಪಿ ಶಾಸಕರು ಹೊರಬಂದ ನಂತರ ನಮ್ಮ ಆಟ ಶುರುವಾಗಲಿದೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಬಿಜೆಪಿ ನಾಯಕರಿಗೆ ಹೇಳಿದ್ದಾರೆ.
ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯ 6 ಮಂದಿ ಶಾಸಕರು ನಿರಂತರ ನಮ್ಮ ಸಂಪರ್ಕದಲ್ಲಿದ್ದಾರೆ. ಅವರು ಯಾರು ಎಂದು ಹೀಗ ನಾನು ಹೇಳುವುದಿಲ್ಲ. ರೆಸಾರ್ಟ್ ನಿಂದ ಹೊರಬಂದ ಮೇಲೆ ಯಾರೆಲ್ಲ ರಾಜೀನಾಮೆ ನೀಡುತ್ತಾರೆ ಎಂದು ನೀವೆ ನೋಡಿ ಎಂದು ಹೇಳಿದರು.
ಬಿಜೆಪಿಯವರು ತೋಡಿರುವ ಖೆಡ್ಡಕ್ಕೆ ಅವರೇ ಬೀಳಲಿದ್ದಾರೆ. ಕಾಂಗ್ರೆಸ್ ಜೆಡಿಎಸ್ನಲ್ಲಿ ಯಾವುದೇ ಗೊಂದಲವಿಲ್ಲ, ಕಾಂಗ್ರೆಸ್ ಶಾಸಕರು ರೆಸಾರ್ಟ್ಗೆ ಹೋಗಿರುವುದಕ್ಕೆ ಬೇರೆ ಅರ್ಥಕಲ್ಪಿಸುವುದು ಬೇಡ. ಸಮ್ಮಿಶ್ರ ಸರ್ಕಾರವನ್ನು ಟೀಕಿಸುವ ನೈತಿಕತೆ ಬಿಜೆಪಿಯವರಿಗಿಲ್ಲ, ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರು ಪಕ್ಷಕ್ಕೆ ಪಾಠ ಮಾಡಿದ್ದಾರೆ. ಅದನ್ನು ತಿಳಿದುಕೊಂಡರೆ ಸಾಕು ಎಂದು ಹೇಳಿದರು.
ಇನ್ನೂ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿಯವರನ್ನು ಕಣಕ್ಕಿಳಿಸಬೇಕು ಎಂಬುದು ಕಾರ್ಯಕರ್ತರ ಮತ್ತು ನಮ್ಮೆಲ್ಲರೆ ಚಿಂತನೆಯಾಗಿದೆ. ನಮ್ಮ ಪಕ್ಷದ ವರಿಷ್ಠರು ಮುಂದಿನ ದಿನಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.