ಸಮಾಜದಲ್ಲಿನ ತಾರತಮ್ಯಗಳ ವಿರುದ್ಧ ಹೋರಾಟ ಅಗತ್ಯ: ಸಂಸದ ಸುರೇಶ್ ಅಂಗಡಿ
ಬೆಳಗಾವಿ, ಜ.21: ಸಮಾಜದಲ್ಲಿರುವ ತಾರತಮ್ಯಗಳ ವಿರುದ್ಧ 12ನೇ ಶತಮಾನದಲ್ಲಿ ಶರಣರು ನಡೆಸಿದ ಹೋರಾಟವನ್ನು ಇಂದಿಗೂ ಮುಂದುವರಿಸಿಕೊಂಡು ಹೋಗಬೇಕಾದ ಪರಿಸ್ಥಿತಿಯಿದೆ ಎಂದು ಸಂಸದ ಸುರೇಶ್ ಅಂಗಡಿ ಹೇಳಿದ್ದಾರೆ.
ನಗರದ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಳಗಾವಿ ಮಹಾನಗರ ಪಾಲಿಕೆಯ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
12ನೇ ಶತಮಾನದಲ್ಲಿ ನಡೆದ ಸಾಮಾಜಿಕ ಕ್ರಾಂತಿಯು ಜಾತಿ ತಾರತಮ್ಯದ ವಿರುದ್ಧ ಧ್ವನಿಯಾಗಿತ್ತು. ಆದರೆ, ಇಂದಿಗೂ ಜಾತಿ, ಮತ, ಲಿಂಗ ಎಂಬುದೇ ಮುಂದುವರೆದಿದ್ದು, ಇದರ ವಿರುದ್ಧ ನಿರಂತರ ಹೋರಾಟ ನಡೆಯುವ ಅಗತ್ಯವಿದೆ ಎಂದು ಅವರು ಹೇಳಿದರು.
ಅಂಬಿಗರ ಚೌಡಯ್ಯನವರು ತಮ್ಮ ವಚನಗಳ ಮೂಲಕ ಸಮಾನತೆ ಹಾಗೂ ಸಹೋದರತೆಯನ್ನು ಸಾರುವ ಕಾರ್ಯವನ್ನು ಮಾಡಿದರು. ನೇರವಾಗಿ ಸಾಮಾಜಿಕ ದೋಷಗಳನ್ನು ಎತ್ತಿ ತೋರಿಸಿ ಅದಕ್ಕೆ ಪರಿಹಾರವನ್ನು ಸೂಚಿಸುವ ಕಾರ್ಯವನ್ನು ಮಾಡಿದ ಅವರನ್ನು ಸ್ಮರಿಸಬೇಕಿದೆ ಎಂದು ಸುರೇಶ್ ಅಂಗಡಿ ತಿಳಿಸಿದರು.
ಅಂಬಿಗರ ಚೌಡಯ್ಯನವರ ಕುರಿತು ವಿಶೇಷ ಉಪನ್ಯಾಸ ನೀಡಿದ ಡಾ.ಈಶ್ವರ ಮಂಟೂರ ಮಾತನಾಡಿ, ನೇರ ನುಡಿಯ ವಚನಕಾರ ಅಂಬಿಗರ ಚೌಡಯ್ಯ ಕೇವಲ ಒಂದು ಜಾತಿ ಸಮುದಾಯ ಅಥವಾ ಕುಲಕ್ಕೆ ಸೀಮಿತವಾದವರಲ್ಲ. ಅವರು ನಿರಾಶ್ರಿತರನ್ನು, ಬಡವರನ್ನು ಎತ್ತಿ ಹಿಡಿದವರು ಎಂದರು.
ಅವರ ವಚನಗಳಲ್ಲಿ ಬದುಕಿನ ಸೂತ್ರಗಳಿವೆ. ಅವರಲ್ಲಿ ವೃತ್ತಿ ಗೌರವವಿತ್ತು. ದೇವರಿಗೆ ಹೆಸರಿಲ್ಲ ಎಲ್ಲವನ್ನು ನಾವೇ ಸೃಷ್ಟಿಸಿಕೊಂಡಿರುವಂತಹದ್ದು ಎಂದು ತಿಳಿಸಿದ ಚೌಡಯ್ಯನವರ ಚಿಂತನೆಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು. ಸುಮಾರು 800 ವರ್ಷಗಳ ಹಿಂದೆಯೇ ತಮ್ಮ ವಚನಗಳ ಮೂಲಕ ಜನಸಾಮಾನ್ಯರಿಗೆ ವೈಚಾರಿಕತೆ ಅರಿವು ಮೂಡಿಸಲು ಹಾಗೂ ಮೂಢನಂಬಿಕೆಗಳನ್ನು ಮತ್ತು ಅರ್ಥವಿಲ್ಲದ ಆಚರಣೆಗಳನ್ನು ತೊಲಗಿಸಲು ಶ್ರಮಿಸಿದ ಅಂಬಿಗರ ಚೌಡಯ್ಯ ನಿಜಕ್ಕೂ ನಿಜ ಶರಣ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಮೇಯರ್ ಬಸಪ್ಪ ಚಿಕ್ಕಲದಿನ್ನಿ, ಉಪಮೇಯರ್ ಮಧುಶ್ರೀ, ಪೂಜಾರ, ಬೆಳಗಾವಿ ತಹಶೀಲ್ದಾರ್ ಮಂಜುಳಾ ನಾಯಕ, ಜಿಲ್ಲಾ ಪಂಚಾಯತ್ ಸದಸ್ಯ ಸಿದ್ದು ಸುನಗಾರ, ಬೆಳಗಾವಿ ಜಿಲ್ಲಾ ಗಂಗಾಮತಸ್ಥರ ಸಮಾಜ ಸಂಘದ ಅಧ್ಯಕ್ಷ ಗಂಗಾರಾಮ ತಳವಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.