ಬೆಳಗಾವಿಯಲ್ಲಿ ಅಂತರ್ರಾಷ್ಟ್ರೀಯ ಕುಸ್ತಿ ಶಾಲೆ ಪ್ರಾರಂಭ: ಸಚಿವ ಸತೀಶ್ ಜಾರಕಿಹೊಳಿ
ಬೆಳಗಾವಿ, ಜ.26: ರಾಜ್ಯದ ಸಮಗ್ರ ಅಭಿವೃದ್ಧಿಯೆ ನಮ್ಮ ಸರಕಾರದ ಆದ್ಯತೆಯಾಗಿದ್ದು, ಬೆಳಗಾವಿ ತಾಲೂಕಿನ ಸಾವಗಾಂವ ಗ್ರಾಮದ 2 ಎಕರೆ ಜಮೀನಿನಲ್ಲಿ ಅಮೆರಿಕ ಮಾದರಿಯ ಅಂತರ್ರಾಷ್ಟ್ರೀಯ ಕುಸ್ತಿ ಶಾಲೆಯನ್ನು ಪ್ರಾರಂಭಿಸಲು ಚಿಂತಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಶನಿವಾರ ಗಣರಾಜ್ಯೋತ್ಸವದ ಅಂಗವಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಭಾಷಣ ಮಾಡಿದ ಅವರು, ರಾಜ್ಯದಲ್ಲಿ ನಮ್ಮ ಸಮ್ಮಿಶ್ರ ಸರಕಾರ ಅಧಿಕಾರದಲ್ಲಿದ್ದು, ಕರ್ನಾಟಕವನ್ನು ಅಭಿವೃದ್ದಿ ಪಥದತ್ತ ಕೊಂಡೊಯ್ಯುವಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಜನಪರ ನಾಯಕತ್ವ, ಆಡಳಿತದಲ್ಲಿನ ಪಾರದರ್ಶಕತೆ ನಮ್ಮ ಸರಕಾರದ ದಿಕ್ಸೂಚಿಯಾಗಿದೆ ಎಂದರು.
2018ನೇ ಸಾಲಿನಲ್ಲಿ ಸಾಮಾನ್ಯ ಮಳೆ ಪ್ರಮಾಣಕ್ಕೆ ಹೋಲಿಸಿದರೆ, ಮುಂಗಾರು ಹಂಗಾಮಿನಲ್ಲಿ 17 ಮಿ.ಮಿ. ಹಾಗೂ ಹಿಂಗಾರು ಹಂಗಾಮಿನಲ್ಲಿ 51 ಮಿ.ಮಿ. ಮಳೆ ಕೊರತೆ ಆಗಿದೆ. ಮುಂಗಾರು ಹಂಗಾಮಿನಲ್ಲಿ ಅಥಣಿ, ಕಾಗವಾಡ, ರಾಮದುರ್ಗ, ಸವದತ್ತಿ ಹಾಗೂ ಹಿಂಗಾರು ಹಂಗಾಮಿನಲ್ಲಿ ಎಲ್ಲ 14 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.
ಬೆಳಗಾವಿ ಜಿಲ್ಲೆಯಲ್ಲಿ 3.94 ಲಕ್ಷ ರೈತರ ಒಟ್ಟು 2418 ಕೋಟಿ ರೂ.ಸಾಲವನ್ನು ಮನ್ನಾ ಮಾಡಲಾಗುತ್ತಿದ್ದು, ಈಗಾಗಲೇ 24,959 ರೈತರ ಸಾಲ 376.45 ಕೋಟಿ ರೂ.ಪಾವತಿಸಲಾಗಿದೆ. ಜಿಲ್ಲೆಗೆ ಸ್ಮಾರ್ಟ್ ಸಿಟಿ ಯೋಜನೆಯಡಿ ಒಂದು ಸಾವಿರ ಕೋಟಿ ರೂ.ಹಂಚಿಕೆಯಾಗಿದೆ ಎಂದು ಅವರು ಹೇಳಿದರು.
ಈ ಅನುದಾನದಲ್ಲಿ ಸ್ಮಾರ್ಟ್ ರಸ್ತೆಗಳಿಗೆ 434 ಕೋಟಿ ರೂ., ಅಂಡರ್ಗ್ರೌಂಡ್ ಎಲ್.ಟಿ.ವಿದ್ಯುತ್ ಕೇಬಲ್ ಹಾಗೂ ಆಲಂಕಾರಿಕ ವಿದ್ಯುತ್ ಕಂಬಗಳಿಗೆ 154 ಕೋಟಿ ರೂ., ಸೆಂಟ್ರಲ್ ಕಮಾಂಡ್ ಕಂಟ್ರೋಲ್ ಸೆಂಟರ್ಗೆ 126 ಕೋಟಿ ರೂ., ಕಲಾಮಂದಿರ ಜಾಗದಲ್ಲಿ ಅತ್ಯಾಧುನಿಕ ಮಾರಾಟ ಮಳಿಗೆ ಸ್ಥಾಪಿಸಲು 43 ಕೋಟಿ ರೂ. ಹಾಗೂ ಇತರೆ ಕಾಮಗಾರಿಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು. ಪೋಲಿಸ್ ಆಯುಕ್ತರ ಕಚೇರಿ ನಿರ್ಮಾಣಕ್ಕೆ 17 ಕೋಟಿ ರೂ.ಮೊತ್ತದ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಅರಣ್ಯ ಇಲಾಖೆಯ ಸಮಗ್ರ ಆಧುನೀಕರಣ ಯೋಜನೆಯಡಿಯಲ್ಲಿ ಅತ್ಯಾಧುನಿಕವಾಗಿ ಹಾಗೂ ಈಗಿನ ಪರಿಸ್ಥಿತಿಗೆ ಅನುಗುಣವಾಗಿ ಆಧುನಿಕ ತಂತ್ರಾಂಶ, ಉಪಕರಣ, ಗಣಕೀಕರಣ, ಆಧುನಿಕ ಶಸ್ತ್ರಾಸ್ತ್ರಗಳು, ದ್ರೋಣ್ ಇತ್ಯಾದಿಗಳನ್ನು ಬಳಸಿಕೊಂಡು ಅರಣ್ಯ ಸಂರಕ್ಷಣೆ ಮತ್ತು ನಿರ್ವಹಣೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ಸೆಂಟರ್ ಫಾರ್ ಎಕ್ಸ್ಲೆನ್ಸ್ಗಳನ್ನು ಸ್ಥಾಪಿಸಿ ಅಳಿವಿನಿಂದ ಉಳಿವಿನೆಡೆಗೆ, ಡೀಮ್ಡ್ ಫಾರೆಸ್ಟ್(ಪರಿಭಾತ ಅರಣ್ಯ)ಗಳ ಮೋಜಣಿ ಮತ್ತು ಗಡಿ ಗುರುತಿಸುವಿಕೆ, ಹುಲ್ಲುಗಾವಲು ಪ್ರದೇಶಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ಸತೀಶ್ ಜಾರಕಿಹೊಳಿ ಹೇಳಿದರು.