ಬಿಜೆಪಿಯ ಆಪರೇಷನ್ ಪ್ರವೃತ್ತಿ ಹೇಸಿಗೆ ಅನ್ನಿಸುತ್ತಿದೆ: ಬಸವರಾಜ್ ಹೊರಟ್ಟಿ
ಧಾರವಾಡ, ಜ.27: ಬಿಜೆಪಿಯವರು ಆಪರೇಷನ್ ಕಮಲ ಯಾಕೆ ಮಾಡುತ್ತಿದ್ದಾರೆಂದು ನನಗೆ ಅರ್ಥವಾಗುತ್ತಿಲ್ಲ ಅವರು ಲೋಕಸಭಾ ಚುನಾವಣೆಗೆ ತಯಾರಿ ಮಾಡಿಕೊಳ್ಳಬೇಕು. ಅದನ್ನು ಬಿಟ್ಟು ಈ ರೀತಿ ಮಾಡುವುದು ಸರಿಯಲ್ಲ ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಬಿಜೆಪಿಗರಿಗೆ ಕಿವಿಮಾತು ಹೇಳಿದ್ದಾರೆ.
ಆಪರೇಷನ್ನಿಂದ ರಾಜ್ಯದ ಆಡಳಿತ ಹದಗೆಟ್ಟು ಹೋಗಿದ್ದು, ನನಗೆ ಹೇಸಿಗೆ ಅನಿಸುತ್ತಿದೆ. ಇದು ಒಳ್ಳೆ ನಡತೆ ಅಲ್ಲ, ಸರ್ಕಾರ ಬೀಳಿಸುವುದಾದರೆ ಬೀಳಿಸಿ ಬಿಡಲಿ,ಇಲ್ಲವೇ ಸರ್ಕಾರ ನಡೆಸಲು ಬಿಡಲಿ ಎಂದು ಬಿಜೆಪಿಗರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಇದೊಂದು ರೀತಿ ತೋಳ ಬಂತು ತೋಳ ಅನ್ನೋ ಹಾಗೆ ಆಗಿದ್ದು, ಪ್ರತಿದಿನ ಕಾಲು ಜಗ್ಗಿ ಭಯದ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ. ಸರ್ಕಾರದ ತಂಡಗಳು ಬರ ಅಧ್ಯಯನ ಮಾಡಿದ್ದು, ಬಿಜೆಪಿಯವರು ಬರ ಅಧ್ಯಯನ ವಿಷಯದಲ್ಲಿ ಹೈಡ್ರಾಮಾ ಮಾಡುತ್ತಿದ್ದಾರೆ.
ರಾಜ್ಯದ ಅಭಿವೃದ್ಧಿಗೆ ಸಹಕಾರ ಮಾಡುವುದು ವಿರೋಧ ಪಕ್ಷದ ಧರ್ಮ ಅದನ್ನು ಬಿಜೆಪಿಯವರು ಪಾಲಿಸಬೇಕು. ಸಿಎಂ ತಮ್ಮ ಮಗನ ಸಿನಿಮಾ ನೋಡೋಕೆ ಹೋಗಿದ್ರಲ್ಲಿ ತಪ್ಪೇನಿದೆ. ಅದೇನ ದೊಡ್ಡ ತಪ್ಪು ಬಿಜೆಪಿಯವರೇನು ಎಲ್ಲ ತಮ್ಮ ಮಕ್ಕಳನ್ನು ಬಿಟ್ಟು ಬಿಟ್ಟಿದಾರೆಯೇ ಎಂದು ಪ್ರಶ್ನಿಸಿದ್ದಾರೆ.