ಅಂತರ್ ಜಿಲ್ಲಾ ಕಳ್ಳನ ಬಂಧನ: 17.20 ಲಕ್ಷ ರೂ. ಮೌಲ್ಯದ ಸೊತ್ತು ವಶ
ದಾವಣಗೆರೆ,ಫೆ.6: ಗ್ರಾಮೀಣ ಪ್ರದೇಶಗಳಲ್ಲಿ ಕಳ್ಳತನ ಮಾಡುತ್ತಿದ್ದ ಅಂತರ್ ಜಿಲ್ಲಾ ಕಳ್ಳನನ್ನು ಬಂಧಿಸಿ ಆತನಿಂದ ಸುಮಾರು 17.20 ಲಕ್ಷ ರೂ ಮೌಲ್ಯದ ಸೊತ್ತು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಆರ್.ಚೇತನ್ ತಿಳಿಸಿದರು.
ಚನ್ನಗಿರಿ ತಾಲೂಕಿನ ಗಾರೆ ಕೆಲಸ ಮಾಡುವ ಅಫ್ರೀಜ್ ಅಹ್ಮದ್ (35) ಬಂಧಿತ ಆರೋಪಿ. ಈತನಿಂದ 519 ಗ್ರಾಂ ಬಂಗಾರ, 2800 ಗ್ರಾಂ ಬೆಳ್ಳಿ ಆಭರಣ ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಎರಡು ಕಬ್ಬಿಣದ ರಾಡ್ ಗಳು, ಟಾರ್ಚ್ ಹಾಗೂ ಬೈಕ್ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಮ್ಮ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸಂತೆಬೆನ್ನೂರು, ಮಾಯಕೊಂಡ, ಹೊಸದುರ್ಗ, ಶಿವಮೊಗ್ಗ, ಚಿಕ್ಕಜಾಜೂರು, ಹೊಳಲ್ಕೆರೆ, ಹೊಳೆಹೊನ್ನೂರು, ನ್ಯಾಮತಿ ಸೇರಿದಂತೆ ವಿವಿಧೆಡೆ ಬೈಕ್ ನಲ್ಲಿ ಸುತ್ತಾಡುತ್ತಾ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಹೊಂಚು ಹಾಕಿ ಕಳ್ಳತನ ಮಾಡುತ್ತಿದ್ದ. ಇತ್ತೀಚಿಗೆ ಬಾಡಾ ಕ್ರಾಸ್ ಬಳಿಯ ಗಣೇಶ ದೇವಸ್ಥಾನದ ಹತ್ತಿರ ಅನುಮಾನಸ್ಪದವಾಗಿ ತಿರುಗಾಡುತ್ತಿದ್ದ ವೇಳೆ ಅನುಮಾನಗೊಂಡ ಪೊಲೀಸರು ಆತನನ್ನು ವಿಚಾರಣೆಗೊಳಪಡಿಸಿದಾಗ ಕಳ್ಳತನದ ಬಗ್ಗೆ ಒಪ್ಪಿಕೊಂಡಿದ್ದಾನೆ ಎಂದು ವಿವರಿಸಿದರು. ಈ ಪ್ರಕರಣ ಪತ್ತೆ ಮಾಡುವಲ್ಲಿ ಯಶಸ್ವಿಯಾದ ಸಿಬ್ಬಂದಿಗೆ ನಗದು ಬಹುಮಾನ ಘೋಷಿಸಿದರು.
ಗೋಷ್ಟಿಯಲ್ಲಿ ಎ ಎಸ್ ಪಿ ಟಿ.ಜೆ.ಉದೇಶ್, ಡಿಸಿಐಬಿ ಪಿಐ ಎಸ್.ಲಕ್ಷ್ಮಣನಾಯ್ಕ, ಸಿಬ್ಬಂದಿಗಳು ಹಾಜರಿದ್ದರು.