"ಪ್ರವಾದಿ ಮುಹಮ್ಮದರು ಶಾಂತಿ, ಸೌಹಾರ್ದ, ಮಾನವೀಯತೆಯ ಸಂದೇಶ ಸಾರಿದ ಮಹಾನ್ ಚೇತನ"
ಗೃಹ ಸಚಿವ ಎಂ.ಬಿ.ಪಾಟೀಲ್
ವಿಜಯಪುರ,ಫೆ.9: ಇಸ್ಲಾಂ ಶಾಂತಿಯನ್ನು ಬಯಸುವ ಹಾಗೂ ಶಾಂತಿಯ ಆಶಯ ಹೊಂದಿದ ಧರ್ಮ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ವಿಜಯಪುರದ ದರಬಾರ ಹೈಸ್ಕೂಲ್ ಮೈದಾನದಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಅವರ ಹೆಸರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಶಾಂತಿ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಇಸ್ಲಾಂನ ಶಬ್ದವನ್ನು ಅವಲೋಕಿಸುವುದಾದರೆ ಇಸ್ಲಾಂ ಎಂದರೆ ಸಲಾಮ್, ಸಲಾಮ್ನ ಅರ್ಥವೇ ಶಾಂತಿ. ಹೀಗಾಗಿ ಶಾಂತಿ ಎಂದರೆ ಇಸ್ಲಾಂ, ಇಸ್ಲಾಂ ಎಂದರೆ ಶಾಂತಿ ಎಂದರು.
ಸೌಹಾರ್ದತೆ, ದಯೆ, ಒಗ್ಗಟ್ಟು, ಪ್ರೀತಿ, ಬದ್ಧತೆ ಇಸ್ಲಾಂ ಧರ್ಮದ ಆಶಯಗಳಾಗಿವೆ. ಪ್ರವಾದಿ ಮುಹಮ್ಮದ್ (ಸ.ಅ) ಅವರು ಜಗತ್ತಿಗೆ ಶಾಂತಿ, ಸೌಹಾರ್ದತೆ, ಮಾನವೀಯತೆಯ ಸಂದೇಶವನ್ನು ಸಾರಿದ ಮಹಾನ್ ಚೇತನ. ಅವರ ಆದರ್ಶಗಳನ್ನು ಅಳವಡಿಸಿಕೊಂಡು ಬದುಕಬೇಕಿದೆ. ಎಲ್ಲೆಡೆ ಶಾಂತಿ ನೆಲಸಬೇಕು ಎಂಬುದು ಪ್ರವಾದಿ ಮುಹಮ್ಮದ್ (ಸ.ಅ) ಅವರ ಆಶಯವಾಗಿತ್ತು ಎಂದು ಹೇಳಿದರು.
ಗಳಿಕೆಯ ಒಂದು ಭಾಗವನ್ನು ಬಡವರಿಗೆ ನೀಡುವಂತೆ ಇಸ್ಲಾಂ ಸೂಚನೆ ನೀಡಿದೆ. ನಿರ್ಗತಿಕರ, ಅನಾಥರ ಜೀವನದಲ್ಲಿ ಬೆಳಕನ್ನು ತೋರಿ ಅವರ ಜೀವನ ಉಜ್ವಲವಾಗಿ ಶ್ರಮಿಸುವಂತೆ ಇಸ್ಲಾಂ ಪ್ರೇರಣೆ ನೀಡುತ್ತದೆ ಎಂದರು.
ಸರ್ವಜನಾಂಗದ ಶಾಂತಿಯ ತೋಟವಾಗಬೇಕು ಎಂಬ ಹಿರಿಯರ ಆಶಯವನ್ನು ಈಡೇರಿಸುವ ಸಂಕಲ್ಪ ಮಾಡಬೇಕಾಗಿದೆ. ಮುಸ್ಲಿಂ ಬಾಂಧವರೊಡನೆ ಅವಿನಾಭಾವ ಸಂಬಂಧ ಹೊಂದಿದ್ದೇನೆ. ನೀರಾವರಿ ಸಚಿವನಾಗಿ ಐತಿಹಾಸಿಕ ಕೆರೆ ತುಂಬುವ ಯೋಜನೆ, ಐತಿಹಾಸಿಕ ಬಾವಡಿಗಳ ಪುನಶ್ಚೇತನ ಕಾರ್ಯ ಕೈಗೊಂಡಿರುವುದು ತೃಪ್ತಿ ತಂದಿದೆ. ವಿದ್ಯುತ್ಛಕ್ತಿ ಇಲ್ಲದ, ಪ್ರಸ್ತುತ ಜಿಲ್ಲೆಯ ಜನಸಂಖ್ಯೆಗಿಂತ ಹತ್ತು ಪಟ್ಟು ಜನಸಂಖ್ಯೆ ಇದ್ದ ಸಂದರ್ಭದಲ್ಲಿ ಆದಿಲ್ ಶಾ ಅರಸರು ಸಮರ್ಪಕವಾಗಿ ಕುಡಿಯುವ ನೀರು ಒದಗಿಸುತ್ತಿದ್ದರು ಎಂದು ಸ್ಮರಿಸಿದರು.
ಕೆಟ್ಟವರು ಎಲ್ಲ ಧರ್ಮದಲ್ಲಿಯೂ ಇದ್ದಾರೆ. ಕೆಟ್ಟ ಕಾರ್ಯಗಳನ್ನು ಮಾಡುವವರಿಗೆ ಯಾವುದೇ ಧರ್ಮವಿಲ್ಲ. ಕೆಟ್ಟದ್ದು ಮಾಡುವುದೇ ಅವರ ಧರ್ಮ. ಹೀಗಾಗಿ ಅಂತಹ ವ್ಯಕ್ತಿಗಳ ಬಗ್ಗೆ ತಲೆ ಕೆಡಿಸಿಕೊಳ್ಳದೇ, ಮಹಾತ್ಮರ ಆದರ್ಶಗಳನ್ನು ಅನುಸರಿಸಿ ಜೀವನದಲ್ಲಿ ಮುನ್ನಡೆಯಬೇಕು ಎಂದು ಕರೆ ನೀಡಿದರು.
ಕಲಬುರ್ಗಿಯ ಹಝ್ರತ್ ಖ್ವಾಜಾ ಬಂದೇನವಾಜ್ ದರ್ಗಾದ ಸಜ್ಜಾದೆ ನಶೀನ್ ಡಾ.ಸೈಯ್ಯದ್ ಖುಸ್ರೋ ಹುಸೇನಿ, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್, ಸರ್ಕಾರದ ನವದೆಹಲಿ ಪ್ರತಿನಿಧಿ ಸೈಯ್ಯದ್ ಮೊಹೀದ್ ಅಲ್ತಾಪ್ ಮಾತನಾಡಿದರು.
ಕಾರ್ಯಕ್ರಮದ ಸಂಘಟಕ, ಕರ್ನಾಟಕ ಅಹ್ಲೆ ಸುನ್ನತ್ ಜಮಾತ್ನ ರಾಜ್ಯಾಧ್ಯಕ್ಷ ಹಝ್ರತ್ ಸೈಯ್ಯದ್ ತನ್ವೀರ್ ಪೀರ್ ಹಾಶ್ಮೀ, ಖ್ವಾಜಾ ಅಮೀನ್ ದರ್ಗಾದ ಸಜ್ಜಾದೆ ನಶೀನ್ ಸೈಯ್ಯದ್ ಗೇಸುದರಾಜ್, ಸೈಯ್ಯದ್ ತಾಜುದ್ದೀನ್ ಪೀರ್, ಪ್ರೊ.ವಾಜೀದ ಪೀರ್, ಮೌಲಾನಾ ಮುಹಮ್ಮದ್ ಅಲಿ, ನವದೆಹಲಿಯ ಉಲಮಾ ಮಶಾಯಿಕ್ ಬೋರ್ಡ್ ಅಧ್ಯಕ್ಷ ಸೈಯ್ಯದ್ ಮುಹಮ್ಮದ್ ಅಶ್ರಫುಲ್ ಅಲ್ ಜೀಲಾನಿ, ಮೌಲಾನಾ ಸೈಯ್ಯದ್ ಆಲಿ ಮುಸ್ತಫಾ, ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಪ್, ಜಿಲ್ಲಾ ವಕ್ಫ್ ಸಲಹಾ ಮಂಡಳಿ ಅಧ್ಯಕ್ಷ ಉಸ್ಮಾನ್ ಪಟೇಲ್, ಉಪಾಧ್ಯಕ್ಷ ಸೈಯ್ಯದ್ ಆಸೀಫುಲ್ಲಾ ಖಾದ್ರಿ, ರವಿಕುಮಾರ ಚೌಹಾಣ್ ಸೇರಿ ಅನೇಕರು ಸಮಾರಂಭದಲ್ಲಿ ಉಪಸ್ಥಿತರಿದ್ದರು.