ಬಿಜೆಪಿಯ ಆಪರೇಶನ್ ಕಮಲ ಆಡಿಯೋ ವಿಚಾರ: ತಪ್ಪೊಪ್ಪಿಕೊಂಡ ಯಡಿಯೂರಪ್ಪ
ಹುಬ್ಬಳ್ಳಿ, ಫೆ. 10: ಶಾಸಕ ನಾಗನಗೌಡ ಅವರ ಪುತ್ರನ ಜತೆ ಮಾತನಾಡಿದ್ದು ನಿಜ. ಆದರೆ, ಕೆಲವು ಸತ್ಯಗಳನ್ನು ಮರೆಮಾಚಿ ಆಡಿಯೋವನ್ನು ಬಿಡುಗಡೆ ಮಾಡಲಾಗಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಪ್ಪೊಪ್ಪಿಕೊಂಡಿದ್ದಾರೆ.
ರವಿವಾರ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದಾಖಲೆಗಳು ನನ್ನ ಬಳಿಯೂ ಇವೆ. ನಾಳೆ(ಫೆ.11) ಸದನದಲ್ಲಿ ಇವರ ಬಂಡವಾಳ ಬಯಲು ಮಾಡುತ್ತೇನೆ. ಶಾಸಕರ ಪುತ್ರನನ್ನು ಕಳುಹಿಸಿ ಅವರಿಗೆ ಬೇಕಾದ ರೀತಿ ಆಡಿಯೋ ಮಾಡಿಸಿ ನನ್ನ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ಮಾಡಲಾಗಿದೆ ಎಂದು ದೂರಿದರು.
ಮುಖ್ಯಮಂತ್ರಿ ಕುಮಾರಸ್ವಾಮಿ ಬ್ಲಾಕ್ಮೇಲ್ ರಾಜಕಾರಣ ಮಾಡುತ್ತಿದ್ದಾರೆ. ಈವರೆಗೆ ಯಾವುದೆ ಮುಖ್ಯಮಂತ್ರಿ ಈ ರೀತಿ ನಡೆದುಕೊಂಡಿರಲಿಲ್ಲ ಎಂದು ಟೀಕಿಸಿದ ಬಿಎಸ್ವೈ, ನನ್ನ ಬಳಿ ಇರುವ ಎಲ್ಲ ದಾಖಲೆಗಳನ್ನು ಸದನದ ಮುಂದೆ ಇಡುತ್ತೇನೆ ಎಂದರು.
‘ಆಪರೇಷನ್ ಕಮಲ’ ಸಂಬಂಧ ಫೆ.8ರಂದು ತುರ್ತು ಪತ್ರಿಕಾಗೋಷ್ಠಿ ನಡೆಸಿ ಮುಖ್ಯಮಂತ್ರಿ ಕುಮಾರಸ್ವಾಮಿ ಆಡಿಯೋ ಬಿಡುಗಡೆ ಮಾಡಿದ್ದರು. ಅನಂತರ ಯಡಿಯೂರಪ್ಪ, ‘ನನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ, ಆಡಿಯೋ ನನ್ನದೆಂದು ಸಾಬೀತಾದರೆ, ನಾನು ರಾಜಕೀಯದಿಂದ ನಿವೃತ್ತಿಯಾಗುತ್ತೇನೆ’ ಎಂದು ಸವಾಲು ಹಾಕಿದ್ದರು.