ಮನೆಗಳ ಮುಂಭಾಗ ನಿಲ್ಲಿಸಿದ್ದ ಆರು ಬೈಕ್ಗಳಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಸಾಂದರ್ಭಿಕ ಚಿತ್ರ
ಶಿವಮೊಗ್ಗ, ಫೆ. 12: ಮನೆಗಳ ಮುಂಭಾಗ ನಿಲ್ಲಿಸಿದ್ದ ಆರು ಬೈಕ್ಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಘಟನೆ ಶಿವಮೊಗ್ಗ ನಗರದ ನ್ಯೂ ಮಂಡ್ಲಿ ಬಡಾವಣೆಯ 1 ನೇ ತಿರುವಿನಲ್ಲಿ ತಡರಾತ್ರಿ ನಡೆದಿದೆ.
ನಾಗಾಜ್ ಹಾಗೂ ಶಬರೀಶ್ ಎಂಬುವರ ಮನೆಗಳ ಬಳಿ ಈ ಘಟನೆ ನಡೆದಿದೆ. ಸುಟ್ಟು ಹೋದ ಬೈಕ್ಗಳು ಎರಡು ಕುಟುಂಬದವರಿಗೆ ಸೇರಿದ್ದಾಗಿವೆ. ಭಾಗಶಃ ಬೈಕ್ಗಳು ಸುಟ್ಟು ಹೋಗಿದ್ದು, ಸಾವಿರಾರು ರೂ. ನಷ್ಟ ಸಂಭವಿಸಿದೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ಉಮೇಶ್ ಕೆ ನಾಯ್ಕ್, ಸಬ್ ಇನ್ಸ್ ಪೆಕ್ಟರ್ ಗಿರೀಶ್ರವರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಎರಡು ಕುಟುಂಬದವರು ದೂರು ನೀಡಿದ್ದು, ದೊಡ್ಡಪೇಟೆ ಠಾಣೆಯಲ್ಲಿ ಪ್ರತ್ಯೇಕ ಎಫ್ಐಆರ್ ಗಳು ದಾಖಲಾಗಿವೆ.
ಘಟನೆ ಹಿನ್ನೆಲೆ: ನಾಗರಾಜ್ ಹಾಗೂ ಶಬರೀಶ್ರವರ ಮನೆಗಳು ಒಂದೇ ಬೀದಿಯಲ್ಲಿವೆ. ತಡರಾತ್ರಿ ಕಿಡಿಗೇಡಿಗಳು ಇವರ ಮನೆಗಳ ಮುಂಭಾಗ ಲಾಕ್ ಮಾಡಿ ನಿಲ್ಲಿಸಿದ್ದ ಬೈಕ್ಗಳಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಬೆಂಕಿಯ ಕೆನ್ನಾಲಿಗೆಯಲ್ಲಿ ಬೈಕ್ಗಳು ಉರಿಯುತ್ತಿರುವುದನ್ನು ಕುಟುಂಬದವರು ಗಮನಿಸಿದ್ದಾರೆ. ನೆರೆಹೊರೆಯವರ ನೆರವಿನೊಂದಿಗೆ ಬೆಂಕಿ ನಂದಿಸಲು ಯತ್ನಿಸಿದ್ದಾರೆ.
ಹಾಗೆಯೇ ಅಗ್ನಿಶಾಮಕ ದಳಕ್ಕೆ ಮಾಹಿತಿ ರವಾನಿಸಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೈಕ್ಗಳಿಗೆ ತಗುಲಿದ್ದ ಬೆಂಕಿ ನಂದಿಸುವಲ್ಲಿ ಸಫಲವಾಗಿದ್ದಾರೆ. ಘಟನೆಯಿಂದ ಬಡಾವಣೆಯಲ್ಲಿ ಕೆಲ ಸಮಯ ಗೊಂದಲ-ಆತಂಕದ ವಾತಾವರಣ ನೆಲೆಸಿತ್ತು. ಬೈಕ್ಗಳಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು ಯಾರೆಂಬುವುದು ಗೊತ್ತಾಗಿಲ್ಲ. ಪೊಲೀಸರ ತನಿಖೆಯ ನಂತರವಷ್ಟೆ ಸ್ಪಷ್ಟ ಮಾಹಿತಿ ಲಭ್ಯವಾಗಬೇಕಾಗಿದೆ.