‘ಸಿಟ್’ ತನಿಖೆ ಘೋಷಿಸಲು ಸಿದ್ದರಾಮಯ್ಯ ಯಾರು: ಬಿಜೆಪಿ ಶಾಸಕ ಈಶ್ವರಪ್ಪ ಪ್ರಶ್ನೆ
ಆಡಿಯೋ ಪ್ರಕರಣ
ಹುಬ್ಬಳ್ಳಿ, ಫೆ. 17: ಆಡಿಯೋ ಪ್ರಕರಣದ ಬಗ್ಗೆ ‘ಸಿಟ್’ ತನಿಖೆಯನ್ನು ಮಾಡಿಸುತ್ತೇವೆ ಎಂದು ಘೋಷಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾರು ಎಂದು ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ ಇಂದಿಲ್ಲಿ ಪ್ರಶ್ನಿಸಿದ್ದಾರೆ.
ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಆಡಿಯೋ ಪ್ರಕರಣದ ತನಿಖೆಗೆ ಸಿದ್ದರಾಮಯ್ಯ ಒತ್ತಾಯ ಮಾಡಿ ಸಿಟ್ ತಂಡ ನೇಮಕ ಮಾಡಿಸಿದ್ದಾರೆ. ಇದಕ್ಕೆ ಸಿಎಂ ಮತ್ತು ಸ್ಪೀಕರ್ ಅವರು ಬದ್ಧ ಎಂದಿದ್ದಾರೆ. ಆದರೆ, ಸಿಟ್ ತನಿಖೆ ಘೋಷಿಸಲು ಸಿದ್ದರಾಮಯ್ಯ ಯಾರು ಎಂದು ಕೇಳಿದರು.
ಆಡಿಯೋ ಪ್ರಕರಣದಲ್ಲಿ ಕುಮಾರಸ್ವಾಮಿ ಅವರನ್ನು ಸಿಲುಕಿಸಬೇಕೆಂಬುದು ಸಿದ್ದರಾಮಯ್ಯರ ಉದ್ದೇಶ. ಈಗಾಗಲೇಈ ಫೋನ್ ಕದ್ದಾಲಿಕೆ ಮಾಡಿರುವುದಾಗಿ ಕುಮಾರಸ್ವಾಮಿ ಒಪ್ಪಿಕೊಂಡಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ ಸೋಲಿನ ಸೇಡು ತೀರಿಸಿಕೊಳ್ಳಲು ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂದು ಟೀಕಿಸಿದರು.
ಬಿಜೆಪಿಗೆ ಬಹುಮತವಿಲ್ಲ. ಆದರೆ, ಕಾಂಗ್ರೆಸ್ನಲ್ಲಿ ಅತೃಪ್ತರಿದ್ದಾರೆ. ಅವರು ಏನು ಮಾಡುತ್ತಾರೆಂದು ನೋಡೋಣ. ಕಾಂಗ್ರೆಸ್ ಶಾಸಕರನ್ನು ಬಿಜೆಪಿಯವರು ಹಿಡಿದಿಟ್ಟಿದ್ದಾರೆಂದು ಎಲ್ಲೂ ಹೇಳಿಲ್ಲ. ಕಾಂಗ್ರೆಸ್ ಮೇಲೆ ಅತೃಪ್ತಿ ಇದೆ ಎಂದು ಹೇಳಿದ್ದಾರೆ. ಅತೃಪ್ತರು ಯಾವಾಗ ಹೊರಬರುತ್ತಾರೆಂಬುದನ್ನು ನೋಡಬೇಕು ಎಂದು ಈಶ್ವರಪ್ಪ ಹೇಳಿದರು.
ಮೈತ್ರಿ ಸರಕಾರ ಎಲ್ಲಿಯವರೆಗೆ ಇರುತ್ತದೆಯೋ ಗೊತ್ತಿಲ್ಲ. ಅವರ ಸಂಖ್ಯೆ ಕಡಿಮೆಯಾದಾಗ ನಾವು ಹೊಸ ಸರಕಾರ ರಚನೆ ಮಾಡುತ್ತೇವೆ. ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಯಿಂದ ನಮಗೇನೂ ಸಮಸ್ಯೆಯಿಲ್ಲ. 22 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂಬ ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.