34ನೇ ರಾಜ್ಯ ಪತ್ರಕರ್ತರ ಸಮ್ಮೇಳನದ ಲಾಂಛನ, ವೆಬ್ಸೈಟ್, ಮೊಬೈಲ್ ಆಪ್ ಬಿಡುಗಡೆ
ಮೈಸೂರು,ಫೆ.17: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ 34ನೇ ರಾಜ್ಯ ಪತ್ರಕರ್ತರ ಸಮ್ಮೇಳನದ ಅಂಗವಾಗಿ ರೂಪಿಸಲಾಗಿರುವ ಲಾಂಛನ, ವೆಬ್ಸೈಟ್ ಹಾಗೂ ಮೊಬೈಲ್ ಆಪ್ ಅನ್ನು ಬಿಡುಗಡೆಗೊಳಿಸಲಾಯಿತು.
ಮೈಸೂರು ಜಿಲ್ಲೆಯ ತಿರುಮಕೂಡಲು ನರಸೀಪುರದಲ್ಲಿ ನಡೆಯುತ್ತಿರುವ 11ನೇ ಮಹಾ ಕುಂಭಮೇಳದ ವೇದಿಕೆಯಲ್ಲಿ ರವಿವಾರ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಸಮ್ಮೇಳನದ ಲಾಂಛನವನ್ನು ಲೋಕಾರ್ಪಣೆ ಗೊಳಿಸಿದರು.
ಇದೇ ವೇಳೆ ಮಾತನಾಡಿದ ಅವರು, ಸಾಂಸ್ಕೃತಿಕ ಇತಿಹಾಸ ಹೊಂದಿದ ಮೈಸೂರು ಜಿಲ್ಲೆ ಸುತ್ತೂರು ಕ್ಷೇತ್ರದಲ್ಲಿ 34ನೇ ಸಮ್ಮೇಳನ ಆಯೋಜನೆಯಾಗಿರುವುದ ಸಂತೋಷದ ವಿಚಾರ. ಮೈಸೂರಿನ ಈ ಸಮ್ಮೇಳನ ಅತ್ಯಂತ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀಸೋಮನಾಥ ಸ್ವಾಮೀಜಿ ವೆಬ್ಸೈಟ್ ಬಿಡುಗಡೆ ಮಾಡಿದರು. ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಮೊಬೈಲ್ ಆಪ್ ಬಿಡುಗಡೆ ಮಾಡಿದರು. ಶಾಸಕ ಅಶ್ವಿನ್ ಕುಮಾರ್, ಜಿಲ್ಲಾ ಪಂಚಾಯತ್ ಪ್ರಭಾರ ಅಧ್ಯಕ್ಷ ಸಾ.ರಾ.ನಂದೀಶ್ ಪೋಸ್ಟರ್ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಪೂರ್ಣಿಮಾ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಆರ್.ರಾಜು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಉಪಾಧ್ಯಕ್ಷ ಮತ್ತೀಕರೆ ಜಯರಾಂ, ಪ್ರಧಾನ ಕಾರ್ಯದರ್ಶಿ ಎಚ್.ಬಿ.ಮದನ್ಗೌಡ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಉಪಾಧ್ಯಕ್ಷ ಕೋಟೆ ಮಂಜು, ಖಜಾಂಚಿ ಎಲ್.ಜಿ.ದಕ್ಷಿಣಾಮೂರ್ತಿ, ಕಾರ್ಯದರ್ಶಿಗಳಾದ ಬಿ.ರಾಘವೇಂದ್ರ, ಧರ್ಮಾಪುರ ನಾರಾಯಣ್, ರಾಜ್ಯ ಸಮಿತಿ ಸದಸ್ಯ ಎಂ.ಆರ್.ಸತ್ಯನಾರಾಯಣ, ಕಾರ್ಯಕಾರಿ ಸಮಿತಿ ಸದಸ್ಯರಾದ ಜಯಶಂಕರ್ ಬದನಗುಪ್ಪೆ, ಸಿ.ಎಂ.ಕಿರಣ್ ಕುಮಾರ್, ಎಂ.ಮಹದೇವ್, ಟಿ.ನರಸೀಪುರ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ನಾಗೇಂದ್ರ ಕಾರ್ಯದರ್ಶಿ ರೇವಣ್ಣ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.