ರೈತರು, ಸಾರ್ವಜನಿಕರ ಆಸ್ತಿ ಸರ್ವೆಗೆ ಡ್ರೋಣ್ ಬಳಕೆಗೆ ಒಡಂಬಡಿಕೆ
ಸಾಂದರ್ಭಿಕ ಚಿತ್ರ
ಬೆಂಗಳೂರು, ಫೆ. 28: ರಾಜ್ಯದಲ್ಲಿನ ರೈತರು ಮತ್ತು ಸಾರ್ವಜನಿಕರ ಆಸ್ತಿ ಸರ್ವೇಗೆ ಡ್ರೋಣ್ ತಂತ್ರಜ್ಞಾನ ಬಳಕೆ ಮಾಡಿಕೊಳ್ಳುವ ಸಂಬಂಧ ರಾಜ್ಯ ಸರಕಾರದ ಕಂದಾಯ ಇಲಾಖೆ ಹಾಗೂ ಸರ್ವೇಕ್ಷಣಾ ಇಲಾಖೆ ನಡುವೆ ಮಹತ್ವದ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.
ಗುರುವಾರ ವಿಧಾನಸೌಧದಲ್ಲಿ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಸಮ್ಮುಖದಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜ್ಕುಮಾರ್ ಕತ್ರಿ ಹಾಗೂ ಸರ್ವೇಕ್ಷಣಾ ಸಂಸ್ಥೆ ಮಹಾ ನಿರ್ದೇಶಕ ಗಿರೀಶ್ ಕುಮಾರ್ ಒಡಂಬಡಿಕೆಗೆ ಸಹಿ ಹಾಕಿದರು.
ಬಳಿಕ ಮಾತನಾಡಿದ ಸಚಿವ ಆರ್.ವಿ.ದೇಶಪಾಂಡೆ, ಡ್ರೋಣ್ ಮೂಲಕ ಭೂಮಿ ಸರ್ವೆ ನಡೆಸುವುದರಿಂದ ಖರ್ಚು ಕಡಿಮೆಯಾಗಲಿದ್ದು, ಹೆಚ್ಚಿನ ಸಿಬ್ಬಂದಿಯ ಅಗತ್ಯವೂ ಇರುವುದಿಲ್ಲ. ತ್ವರಿತಗತಿಯಲ್ಲಿ ಸಮೀಕ್ಷೆ ನಡೆಸಲು ಸಾಧ್ಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೊದಲ ಹಂತದಲ್ಲಿ ಬೆಂಗಳೂರು, ತುಮಕೂರು, ಹಾಸನ, ಉತ್ತರ ಕನ್ನಡ, ರಾಮನಗರದಲ್ಲಿ ಡ್ರೋಣ್ ಆಧಾರಿತ ಆಸ್ತಿಗಳ ಸರ್ವೇ ನಡೆಸಲಾಗುವುದು. ಈ ಪದ್ಧತಿಯಲ್ಲಿ ಸಮೀಕ್ಷೆ ನಡೆಸುತ್ತಿರುವ ಮೊದಲ ರಾಜ್ಯ ಕರ್ನಾಟಕ ಎಂದು ಅವರು ತಿಳಿಸಿದರು.
ಎರಡನೆ ಹಂತದಲ್ಲಿ ದಕ್ಷಿಣ ಕನ್ನಡ, ವಿಜಯಪುರ, ಕೊಡಗು, ಧಾರವಾಡ, ಮೈಸೂರು, ಗದಗ, ದಾವಣಗೆರೆ ಹಾಗೂ ಕಲಬುರ್ಗಿ ಜಿಲ್ಲೆಗಳಲ್ಲಿ ಡ್ರೋಣ್ ಮೂಲಕ ಸರ್ವೆ ಕಾರ್ಯ ಕೈಗೊಳ್ಳಲಾಗುವುದು ಎಂದ ಅವರು, ಪ್ರತಿಯೊಂದು ಆಸ್ತಿಯ ಗಣಕೀಕೃತ ಜಿಯೋ ರೆಫರೆನ್ಸ್ ಆಗಿರುವ ನಿಖರವಾದ ನಕ್ಷೆಯೂ ಸಿದ್ದವಾಗಲಿದೆ ಎಂದರು.
ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಆಸ್ತಿ ಸರ್ವೆ ನಡೆಸಲು ನಿರ್ಧರಿಸಲಾಗಿದೆ. ಗ್ರಾಮೀಣ ಸರ್ವೆಗೆ 110 ಕೋಟಿ ರೂ. ಹಾಗೂ ನಗರ ಪ್ರದೇಶ ಸರ್ವೆಗೆ 50 ಕೋಟಿ ರೂ.ಮೀಸಲಿಟ್ಟಿದ್ದು, ಈ ಕಾರ್ಯ ಪಾರದರ್ಶಕವಾಗಿ ನಡೆಯಲಿದೆ ಎಂದು ದೇಶಪಾಂಡೆ ತಿಳಿಸಿದರು.
ಭಾರತೀಯ ಸರ್ವೆಕ್ಷಣಾ ಸಂಸ್ಥೆಯ ಗಿರೀಶ್ ಕುಮಾರ್ ಮಾತನಾಡಿ, ಗುಡ್ಡಗಾಡು ಪ್ರದೇಶದಲ್ಲಿ ಡ್ರೋಣ್ ಮೂಲಕ ಸರ್ವೆ ಮಾಡುವುದು ನಿಜಕ್ಕೂ ಸವಾಲಿನ ಕೆಲಸವಾದರೂ ಅದರಲ್ಲಿ ಯಶಸ್ವಿಯಾಗಿ ಸರ್ವೆ ಮಾಡುವ ವಿಶ್ವಾಸವಿದೆ. ಮೊದಲ ಹಂತದಲ್ಲಿ ಐದು ಜಿಲ್ಲೆಗಳಲ್ಲಿ ಸರ್ವೆ ಕಾರ್ಯ ನಡೆಯಲಿದೆ ಎಂದರು.