ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ಗೆ ಟಿಕೆಟ್ ಸಿಗುವುದಿಲ್ಲ: ಶಾಮನೂರು ಶಿವಶಂಕರಪ್ಪ
ದಾವಣಗೆರೆ, ಮಾ.4: ಲೋಕಸಭೆ ಚುನಾವಣೆಗೆ ಕಾಂಗ್ರೆಸ್-ಜೆಡಿಎಸ್ ಮಧ್ಯೆ ಉಂಟಾಗಿರುವ ಟಿಕೆಟ್ ಗೊಂದಲ ಶೀಘ್ರವೇ ಬಗೆಹರಿಯುತ್ತದೆ. ಕ್ಷೇತ್ರ ಹಂಚಿಕೆಯಲ್ಲೂ ಯಾವುದೇ ಗೊಂದಲ ಇಲ್ಲ ಎಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಯಾವುದೇ ಕಾರಣಕ್ಕೂ ಜೆಡಿಎಸ್ಗೆ ಟಿಕೆಟ್ ಸಿಗುವುದಿಲ್ಲ. ಕಾಂಗ್ರೆಸ್ ಅಭ್ಯರ್ಥಿಯೇ ಇಲ್ಲಿ ಸ್ಪರ್ಧಿಸಲಿದ್ದಾರೆ. ಕೆಲವರು ಜೆಡಿಎಸ್ನಿಂದ ಸ್ಪರ್ಧಿಸುವುದಾಗಿ ಹೇಳಿಕೆ ನೀಡುತ್ತಿದ್ದಾರೆ. ಆದರೆ, ಇಲ್ಲಿ ಸ್ಪರ್ಧಿಸುವುದು ಕಾಂಗ್ರೆಸ್ ಅಭ್ಯರ್ಥಿ ಮಾತ್ರ ಎಂದು ಅವರು ಹೇಳಿದರು.
ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಇದೇ ತಮ್ಮ ಕಡೇ ಚುನಾವಣೆಯೆಂಬುದಾಗಿ ಹೇಳಿಕೆ ನೀಡಿದ್ದಾರೆ. ಪ್ರತಿ ಚುನಾವಣೆ ವೇಳೆ ಇದೇ ತಮ್ಮ ಕೊನೆಯ ಚುನಾವಣೆಯೆಂದು ರಾಜಕಾರಣಿಗಳು ಹೇಳುತ್ತಿರುತ್ತಾರೆ. ಮಲ್ಲಿಕಾರ್ಜುನ ಖರ್ಗೆ ಇದೇ ತಮ್ಮ ಕಡೇ ಚುನಾವಣೆಯೆಂದಿದ್ದಾರೆ. ರಾಜಕಾರಣಿಗಳು ಸಾಮಾನ್ಯವಾಗಿ ಇದು ತಮ್ಮ ಕೊನೆಯ ಚುನಾವಣೆಯೆಂದು ಹೇಳುತ್ತಾರೆ. ಮತ್ತೆ ಸ್ಪರ್ಧಿಸುತ್ತಲೇ ಇರುತ್ತಾರೆ ಎಂದರು.
ಚಿಂಚೋಳಿ ಕಾಂಗ್ರೆಸ್ ಶಾಸಕ ಉಮೇಶ್ ಜಾಧವ್ ಬಿಜೆಪಿಯವರಿಗೆ ಮೊದಲೇ ಫಿಕ್ಸ್ ಆಗಿದ್ದು, ಮುಂಚಿತವಾಗಿಯೇ ದುಡ್ಡು ಇಸ್ಕೊಂಡಿದ್ದಕ್ಕಾಗಿ ರಾಜೀನಾಮೆ ನೀಡಿದ್ದಾರೆ. ಜಾಧವ್ ರಾಜೀನಾಮೆ ನೀಡಿದ್ದು, ಬಿಜೆಪಿ ಜೊತೆಗೆ ಮುಂಚೆಯೇ ಫಿಕ್ಸ್ ಆಗಿದ್ದೇ ಇದಕ್ಕೆಲ್ಲಾ ಕಾರಣ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.