ಉಡುಪಿ-ಚಿಕ್ಕಮಗಳೂರು ಕ್ಷೇತ್ರ: ಜೆಡಿಎಸ್ನಿಂದ ಜಯಪ್ರಕಾಶ್ ಹೆಗ್ಡೆಗೆ ಗಾಳ ?
ಬೆಂಗಳೂರು, ಮಾ.14: ಲೋಕಸಭಾ ಚುನಾವಣೆಗೆ ಮೈತ್ರಿಕೂಟದ ಕ್ಷೇತ್ರಗಳ ವಿಂಗಡಣೆಯಾದ ಬಳಿಕ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗಾಗಿ ತೀವ್ರ ಹುಡುಕಾಟ ನಡೆದಿದ್ದು, ಬಿಜೆಪಿ ಪಕ್ಷದ ಮುಖಂಡ ಜಯಪ್ರಕಾಶ್ ಹೆಗ್ಡೆಗೆ ಜೆಡಿಎಸ್ ಗಾಳ ಹಾಕಲಾಗುತ್ತಿದೆ ಎನ್ನಲಾಗಿದೆ.
ಲೋಕಸಭಾ ಚುನಾವಣೆಗೆ ಕ್ಷಣಗಣನೆ ಪ್ರಾರಂಭವಾಗುತ್ತಿದ್ದಂತೆ ಜೆಡಿಎಸ್ ಪಕ್ಷ ತಮಗೆ ಲಭಿಸಿರುವ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹುಡುಕಾಟ ಆರಂಭಿಸಿದೆ. ಪಕ್ಷಕ್ಕೆ ಎಂಟು ಕ್ಷೇತ್ರಗಳು ಲಭ್ಯವಾಗಿದ್ದು, ಆ ಪೈಕಿ ಉಡುಪಿ-ಚಿಕ್ಕಮಗಳೂರು ಒಂದಾಗಿದೆ. ಈ ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿ ಆಯ್ಕೆಗೆ ಜೆಡಿಎಸ್ ಮುಂದಾಗಿದೆ. ಹೀಗಾಗಿ, ಜಯಪ್ರಕಾಶ್ ಹೆಗ್ಡೆಯನ್ನು ಸೆಳೆಯಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಸಂಬಂಧ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರಿಂದಲೇ ಜಯಪ್ರಕಾಶ್ ಹೆಗ್ಡೆಗೆ ಆಹ್ವಾನ ಹೋಗಿದ್ದು, ಕರೆ ಮಾಡಿ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿ ಚುನಾವಣೆಗೆ ನಿಲ್ಲಿ, ನೀವು ನಾಮಪತ್ರ ಸಲ್ಲಿಸಿ ಸಾಕು. ನಾವೇ ಎಲ್ಲವನ್ನು ನೋಡಿಕೊಳ್ತೇವೆ ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ. ದೂರವಾಣಿ ಮೂಲಕ ದೇವೇಗೌಡರು ಹೆಗ್ಡೆ ಅವರಿಗೆ ಕರೆ ಮಾಡಿದ್ದು, ಜತೆಗೆ ಸಿಎಂ ಕುಮಾರಸ್ವಾಮಿಯೂ ಕರೆ ಮಾಡಿ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಜಯಪ್ರಕಾಶ್ ಹೆಗ್ಡೆ ಯಾವುದೇ ಸ್ಪಷ್ಟ ಭರವಸೆ ನೀಡಿಲ್ಲ ಎನ್ನಲಾಗಿದೆ.