ಶಾಸಕ ಆನಂದ್ ಸಿಂಗ್ ಮೇಲಿನ ಹಲ್ಲೆ ಪ್ರಕರಣ: ಆರೋಪಿ ಗಣೇಶ್ ಜಾಮೀನು ಅರ್ಜಿ ವಿಚಾರಣೆ
ಮಾ.20ಕ್ಕೆ ಮುಂದೂಡಿಕೆ
ಬೆಂಗಳೂರು, ಮಾ.19: ಶಾಸಕ ಆನಂದ್ ಸಿಂಗ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆ.ಎನ್.ಗಣೇಶ್ ಜಾಮೀನು ಕೋರಿ ಸಲ್ಲಿಸಿದ ಅರ್ಜಿ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಬುಧವಾರಕ್ಕೆ ಮುಂದೂಡಿದೆ. ಜಾಮೀನು ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ನಲ್ಲಿ ನಡೆಯಿತು.
ಅರ್ಜಿದಾರರ ಪರ ವಾದಿಸಿದ ವಕೀಲರು, ನಮ್ಮ ಕಕ್ಷಿದಾರರಾದ ಗಣೇಶ್ ಅವರು ತಮ್ಮ ಪತ್ನಿ ಜೊತೆಗೆ ಮೊಬೈಲ್ನಲ್ಲಿ ಮಾತನಾಡುತ್ತಿದ್ದಾಗ ಶಾಸಕ ಆನಂದ್ಸಿಂಗ್ ಅವರು ಮೊಬೈಲ್ ಕಿತ್ತುಕೊಂಡು ಗಣೇಶ್ ಪತ್ನಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಆನಂದಸಿಂಗ್ ಮದ್ಯಪಾನ ಮಾಡಿ ಗಣೇಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಆತ್ಮರಕ್ಷಣೆಗಾಗಿ ಗಣೇಶ್, ಆನಂದಸಿಂಗ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.
ಆನಂದ್ ಸಿಂಗ್ ಪರ ವಾದಿಸಿದ ಸರಕಾರಿ ಅಭಿಯೋಜಕ, ಜಾಮೀನು ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿ ಶಾಸಕ ಆನಂದ್ ಸಿಂಗ್ರನ್ನು ಸ್ಥಳದಲ್ಲಿದ್ದ ಶಾಸಕರು ರಕ್ಷಣೆ ಮಾಡದಿದ್ದರೆ ಆನಂದ್ ಸಿಂಗ್ರ ಕೊಲೆಯೆ ನಡೆಯುತ್ತಿತ್ತು. ಅಲ್ಲದೆ, ಆನಂದ್ಸಿಂಗ್ಗೆ ಪೆಟ್ಟು ಕೊಟ್ಟ ಗಣೇಶ್ ಅವರು ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿಲ್ಲ. ಅಲ್ಲದೆ, ಗಣೇಶ್ ಅವರು ರೌಡಿ ಶೀಟರ್ ಹಿನ್ನೆಲೆಯುಳ್ಳವರು. ಹೀಗಾಗಿ, ಅವರಿಗೆ ಜಾಮೀನು ನೀಡಬಾರದೆಂದು ಪೀಠಕ್ಕೆ ಮನವಿ ಮಾಡಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ಅರ್ಜಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.