ಶಾಂತಿಯುತ ಹೋಳಿ ಆಚರಣೆಗೆ ದಾವಣಗೆರೆ ಎಸ್ಪಿ ಆರ್.ಚೇತನ್ ಸೂಚನೆ
ದಾವಣಗೆರೆ,ಮಾ.20: ಹೋಳಿ ಆಚರಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಆಚರಣೆ ಮಾಡಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಆರ್.ಚೇತನ್ ತಿಳಿಸಿದ್ದಾರೆ.
ಹೋಳಿ ಹಬ್ಬವನ್ನು ಮಧ್ಯಾಹ್ನ 12 ಗಂಟೆಯೊಳಗಾಗಿ ಆಚರಣೆ ಮಾಡಬೇಕೆಂದು ಪ್ರಕಟಣೆಯ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಹೋಳಿ ಹಬ್ಬದ ನೆಪದಲ್ಲಿ ಸಾರ್ವಜನಿಕರಿಂದ ಒತ್ತಾಯ ಪೂರ್ವಕವಾಗಿ ಹಣ ವಸೂಲಿ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಒತ್ತಾಯ ಪೂರ್ವಕವಾಗಿ ಬಣ್ಣ ಎರಚುವಂತಿಲ್ಲ, ಪೇಂಟ್, ವಾರ್ನಿಷ್, ಆಸಿಡ್, ಡಾಂಬರ್ ಮತ್ತಿತರ ಯಾವುದೇ ಅಪಾಯಕಾರಿ ರಾಸಾಯನಿಕ ಮಿಶ್ರಣಗಳನ್ನು ಮೈಮೇಲೆ ಎರಚಬಾರದು. ವಾಹನಗಳಲ್ಲಿ ಸಂಚರಿಸುವ ಪ್ರಯಾಣಿಕರ ಮತ್ತು ನೌಕರರ, ಶಾಲಾ ವಿದ್ಯಾರ್ಥಿಗಳ ಮೇಲೆ ಬಣ್ಣ ಎರಚಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕ ನೀರು ಸರಬರಾಜು ಸ್ಥಳಗಳಲ್ಲಿ ಬಣ್ಣ ತೊಳೆದು ನೀರನ್ನು ಮಲಿನ ಮಾಡಬಾರದು. ಎಸೆಸೆಲ್ಸಿ ಹಾಗೂ ಇತರೆ ಶಾಲೆಗಳ ಪರೀಕ್ಷೆಗಳು ನಡೆಯುತ್ತಿರುವುದರಿಂದ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಬಣ್ಣ ಎರಚಬಾರದು.
ಮಹಿಳೆಯರೊಂದಿಗೆ ಅಸಭ್ಯ ವರ್ತನೆ ಕಂಡುಬಂದರೆ ಕ್ರಮಕೈಗೊಳ್ಳಲಾಗುವುದು. ಧ್ವನಿ ವರ್ಧಕ ಅಳವಡಿಕೆ ನಿಯಮವನ್ನು ಮತ್ತು ಅನುಮತಿಯನ್ನು ಸಂಬಂಧಪಟ್ಟ ಆಯೋಜಕರು ಕಟ್ಟುನಿಟ್ಟಾಗಿ ಪಾಲಿಸಬೇಕು. ಬಣ್ಣ ಹಚ್ಚುವ ಕೊನೆಯ ಹಂತದಲ್ಲಿ ಕೆಲ ಕಿಡಿಗೇಡಿಗಳು ಮೈಮೇಲಿನ ಬಟ್ಟೆಗಳನ್ನು ಹರಿದು ಸಾರ್ವಜನಿಕವಾಗಿ ಅಸಭ್ಯವಾಗಿ ನೃತ್ಯ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ದ್ವಿಚಕ್ರವಾಹನಗಳಲ್ಲಿ ಮೂರು ಮಂದಿಯ ಸವಾರಿ, ಕರ್ಕಶ ಶಬ್ದದ ಹಾರನ್, ಗುಂಪುಕಟ್ಟಿ ಕುಣಿಯುವುದು, ನಿಲ್ಲುವುದು ಕಂಡುಬಂದಲ್ಲಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.