ಕೊಳ್ಳೇಗಾಲ: ರಸ್ತೆ ಅಪಘಾತಕ್ಕೆ ಬೈಕ್ ಸವಾರ ಬಲಿ
ಕೊಳ್ಳೇಗಾಲ,ಮಾ.21: ಅಪರಿಚಿತ ಮಹಿಳೆಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಪಟ್ಟಣದ ಈದ್ಗಾ ಮೊಹಲ್ಲಾ ಬಡಾವಣೆಯ ನಿವಾಸಿ ಸಿದ್ದರಾಜು(45) ಮೃತ ವ್ಯಕ್ತಿ. ಹಿಂಬದಿ ಸವಾರ ಲಿಂಗಣಾಪುರ ಬಡಾವಣೆ ನಿವಾಸಿ ಶಶಿಕುಮಾರ್ ಗಾಯಗೊಂಡು ಸಾರ್ವಜನಿಕ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆಗೆ ಮೈಸೂರು ಕೆ.ಆರ್ ಆಸ್ವತ್ರೆಗೆ ದಾಖಲಾಗಿದ್ದಾರೆ.
ಸಿದ್ದರಾಜು ಹಾಗೂ ಶಶಿಕುಮಾರ್ ಸತ್ತೇಗಾಲದಿಂದ ಗಾರೆಕೆಲಸ ಮುಗಿಸಿ ಬೈಕ್ನಲ್ಲಿ ಬರುತ್ತಿದ್ದಾಗ ನರೀಪುರ ಗ್ರಾಮದ ಮುಖ್ಯರಸ್ತೆಯ ಬಳಿ ರಸ್ತೆ ದಾಟುತ್ತಿದ್ದ ಅಪರಿಚಿತ ಮಹಿಳೆಗೆ ಢಿಕ್ಕಿ ಹೊಡೆದಿದ್ದು, ಪರಿಣಾಮ ಇವರಿಬ್ಬರೂ ಕೆಳಗೆ ಬಿದ್ದಿದ್ದಾರೆ. ನಂತರ ಪೊಲೀಸ್ ಜೀಪ್ನಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಸಿದ್ದರಾಜು ತಲೆಗೆ ತೀವ್ರ ಗಾಯವಾದ ಕಾರಣ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸರ್ಕಾರಿ ಉಪವಿಭಾಗ ಆಸ್ಪತ್ರೆಯ ಶವಾಗಾರದಲ್ಲಿ ಸರ್ಕಾರಿ ವೈದ್ಯಾಧಿಕಾರಿ ಡಾ.ವಿದ್ಯಾಶಂಕರ್ ರವರಿಂದ ಶವಪರೀಕ್ಷೆ ನಡೆಸಿ ಶವವನ್ನು ವಾರಸುದಾರರಿಗೆ ನೀಡಲಾಯಿತು.