ಬಿಎಸ್ವೈ ಲೂಟಿಗೈದ ಹಣ ಬಿಜೆಪಿ ವರಿಷ್ಠರಿಗೆ: ಮಾಜಿ ಸಿಎಂ ಸಿದ್ದರಾಮಯ್ಯ
‘ಯಡಿಯೂರಪ್ಪ ಡೈರಿ’ ಪ್ರಕರಣ
ಬೆಂಗಳೂರು, ಮಾ. 22: ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜ್ಯದ ಸಂಪತ್ತನ್ನು ಲೂಟಿ ಮಾಡಿದ್ದು, ಹೀಗಾಗಿಯೇ ದೊಡ್ಡ ಮೊತ್ತದ ಹಣವನ್ನು ಬಿಜೆಪಿ ವರಿಷ್ಠರಿಗೆ ನೀಡಿರುವ ಸಾಧ್ಯತೆಗಳಿವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಶಯ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಹೊಸದಿಲ್ಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಯಡಿಯೂರಪ್ಪ ಆಡಳಿತಾವಧಿಯಲ್ಲಿ 1,800 ಕೋಟಿ ರೂ. ಹಣವನ್ನು ಬಿಜೆಪಿ ಹೈಕಮಾಂಡ್ಗೆ ನೀಡಿರುವ ಬಗ್ಗೆ ಉಲ್ಲೇಖವಿರುವ ಡೈರಿ ದೊರೆತಿದೆ. ಅದರಲ್ಲಿ ಅವರ ಹಸ್ತಾಕ್ಷರವೂ ಇದೆ ಎಂದು ವರದಿಯಾಗಿದೆ ಎಂದು ಹೇಳಿದರು.
2016ರಲ್ಲೇ ಆದಾಯ ತೆರಿಗೆ ಇಲಾಖೆ(ಐಟಿ)ಗೆ ಡೈರಿ ಸಿಕ್ಕಿದ್ದರೂ ಅದನ್ನು ಇದುವರೆಗೂ ಬಹಿರಂಗ ಪಡಿಸಿರಲಿಲ್ಲ. ಅಪರಾಧವನ್ನು ಮತ್ತು ಅದಕ್ಕೆ ಸಂಬಂಧಪಟ್ಟ ಸಾಕ್ಷಿಯನ್ನು ಮುಚ್ಚಿಡುವುದೂ ಒಂದು ಅಪರಾಧ ಎಂದು ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದರು.
‘ಹೊಸದಿಲ್ಲಿಯಲ್ಲಿ ಎಐಸಿಸಿ ಚುನಾವಣಾ ಸಮಿತಿ ಸಭೆಯಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಇಂದು ಅಥವಾ ನಾಳೆ (ಮಾ.23) ಪಟ್ಟಿ ಹೊರಬೀಳಲಿದೆ’
-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ