ರಾಜ್ಯದಲ್ಲಿ ಇನ್ನು ಮುಂದೆ ಬಿಜೆಪಿ ಸರಕಾರ ಇರಲ್ಲ ಎಂದ ಉಮೇಶ್ ಜಾಧವ್ !
ಕಲಬುರ್ಗಿ, ಮಾ. 23: ‘ರಾಜ್ಯದಲ್ಲಿ ಇನ್ನು ಮುಂದೆ ಬಿಜೆಪಿ ಸರಕಾರ ಅಧಿಕಾರದಲ್ಲಿ ಇರುವುದಿಲ್ಲ’ ಎಂದು ಹೇಳುವ ಮೂಲಕ ಕಲಬುರ್ಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಅಚ್ಚರಿ ಮೂಡಿಸಿದ್ದಾರೆ.
ಶನಿವಾರ ಜಿಲ್ಲೆಯ ಗುರುಮಠಕಲ್ನ ಖಾಸಾಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿನ ಪ್ರಸಕ್ತ ರಾಜಕೀಯ ಪರಿಸ್ಥಿತಿಯ ಬಗ್ಗೆ ವಿವರಣೆ ನೀಡುವ ವೇಳೆ ಇನ್ನು ಮುಂದೆ ರಾಜ್ಯದಲ್ಲಿ ಬಿಜೆಪಿ ಸರಕಾರ ಇರುವುದಿಲ್ಲ ಎಂದು ಹೇಳಿದರು.
ಆ ಬಳಿಕ ತಾನು ಬಾಯಿತಪ್ಪಿ ಹೇಳಿದ್ದೇನೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರಕ್ಕೆ ರಾಜ್ಯದಲ್ಲಿ ಇನ್ನೂ ಉಳಿಗಾಲ ಇಲ್ಲ ಎಂದ ಉಮೇಶ್ ಜಾಧವ್, ಮಲ್ಲಿಕಾರ್ಜುನ ಖರ್ಗೆಯವರಿಂದ ಹೈ.ಕ.ಭಾಗದ ಕಾಂಗ್ರೆಸ್ ನಾಯಕರು ಅನ್ಯಾಯಕ್ಕೊಳಗಾಗಿದ್ದಾರೆ. ಅವರ ಜತೆ ಯಾವ ನಾಯಕರು ಉಳಿದಿಲ್ಲ ಎಂದು ಗುಡುಗಿದರು.
ಕಾಂಗ್ರೆಸಿಗರಿಂದಲೇ ನನ್ನ ಗೆಲುವು: ಕ್ಷೇತ್ರದ ಎಲ್ಲ ಕಡೆ ಬೆಂಬಲ ಸಿಗುತ್ತಿದೆ. ಆದರೆ, ಕೆಲವರು ಗೊಂದಲ ಸೃಷ್ಟಿ ಮಾಡುತ್ತಿದ್ದು, ತನ್ನ ಸ್ಪರ್ಧೆಯ ಬಗ್ಗೆ ಕಾನೂನ ತೊಡಕು ಇಲ್ಲ. ರಾಜೀನಾಮೆ ಅಂಗೀಕರಿಸುವ ವಿಶ್ವಾಸವಿದೆ ಎಂದ ಅವರು, ಕ್ಷೇತ್ರದಲ್ಲಿನ ಕಾಂಗ್ರೆಸಿಗರೇ ನನ್ನನ್ನು ಗೆಲ್ಲಿಸಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು.