ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು
ಬೆಂಗಳೂರು, ಮಾ.25: ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ರಾಜ್ಯ ಪೊಲೀಸ್ ಮಹಾ ಸಂಘದ ಅಧ್ಯಕ್ಷ ಶಶಿಧರ್ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.
ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಖಾಸಗಿ ಸಂಬಂಧ ಕುರಿತ ಸರಿಯಾದ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿಲ್ಲ. ಈ ಕುರಿತು ಸರಿಯಾದ ರೀತಿ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ದೂರಿನಲ್ಲಿ ಏನಿದೆ: ಕುಮಾರಸ್ವಾಮಿ ತನ್ನ ಖಾಸಗಿ ಸಂಬಂಧ ವಿಚಾರವನ್ನು ಚುನಾವಣಾ ಆಯೋಗಕ್ಕೆ ತಿಳಿಸಿಲ್ಲ. ಕುಮಾರಸ್ವಾಮಿಗೆ ಖಾಸಗಿ ಸಂಬಂಧದ ಕಾರಣಕ್ಕಾಗಿ ಮಗುವೊಂದು ಜನಿಸಿದೆ. ಮಗುವಿನ ತಂದೆ ಕುಮಾರಸ್ವಾಮಿಯವರೇ ಅನ್ನೋದು ಬಹಿರಂಗವಾಗಿದೆ. ಆದರೆ 2018 ವಿಧಾನಸಭಾ ಚುನಾವಣೆಯಲ್ಲಿ ಇದನ್ನು ಎಚ್ಡಿಕೆ ಮರೆಮಾಚಿದ್ದಾರೆ. ಇದು ಜನಪ್ರತಿನಿಧಿ ಕಾಯ್ದೆಯನ್ವಯ ತಪ್ಪುಎಂದು ಶಶಿಧರ್ ಉಲ್ಲೇಖಿಸಿದ್ದಾರೆ ಎನ್ನಲಾಗುತ್ತಿದೆ.
ದೂರು ನೀಡಿದ ಬಳಿಕ ಮಾತನಾಡಿದ ಶಶಿಧರ್, ಜನಪ್ರತಿನಿಧಿ ಕಾಯ್ದೆ 125(ಎ) ಹಾಗೂ ಭಾರತದ ದಂಡ ಸಂಹಿತೆ ಪ್ರಕಾರ ಚುನಾವಣೆಗೆ ನಿಲ್ಲುವ ಅಭ್ಯರ್ಥಿ ತನ್ನ ಅವಲಂಬಿತರ ಪರಿಪೂರ್ಣ ಪರಿಚಯ ದಾಖಲೆಗಳನ್ನ ನೀಡಬೇಕು. ಆದರೆ, ರಾಧಿಕಾ ಕುಮಾರಸ್ವಾಮಿ ವಿಚಾರ ಹಾಗೂ ಅವರ ಮಗಳ ವಿಚಾರವನ್ನು ಅವರು ಉಲ್ಲೇಖಿಸಿಲ್ಲ. ಈ ಮೂಲಕ ರಾಜ್ಯದ ಜನತೆಗೆ ತಪ್ಪುಸಂದೇಶ ನೀಡಿದ್ದಾರೆ. ಅವರ ಸಂಬಂಧ ಅಧಿಕೃತ ಅಥವಾ ಅನಧಿಕೃತ ಇದ್ದರು ಕಾನೂನಿನ ಅಡಿಯಲ್ಲಿ ಮಾಹಿತಿ ನೀಡಬೇಕು. ಹೀಗಾಗಿ, ಚುನಾವಣಾ ಆಯೋಗ ಸೂಕ್ತ ಕ್ರಮಗಳನ್ನ ಕೈಗೊಳ್ಳಬೇಕು. ಒಂದು ವೇಳೆ ಕ್ರಮ ಕೈಗೊಳ್ಳದಿದ್ದರೆ ಕಾನೂನಿನಡಿ ಹೋರಾಟ ಮಾಡುವೆ ಎಂದು ಶಶಿಧರ್ ಎಚ್ಚರಿಕೆ ನೀಡಿದ್ದಾರೆ.