ಈ ಚುನಾವಣೆ ಕಾಂಗ್ರೆಸ್ ಮುಕ್ತ ಕರ್ನಾಟಕಕ್ಕೆ ಮುನ್ನುಡಿ ಬರೆಯಲಿದೆ: ಪ್ರಹ್ಲಾದ್ ಜೋಶಿ
ವಿಜಯಪುರ,ಮಾ.25: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಮುಗಿಸಲು ದೊಡ್ಡಗೌಡರು ಬಾರಿ ಪ್ಲಾನ್ ಮಾಡಿದ್ದಾರೆ ಎಂದು ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ.
ವಿಜಯಪುರದ ಖಾಸಗಿ ಹೋಟೇಲ್ ನಲ್ಲಿ ಮಾಧ್ಯಮಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಜೆಡಿಎಸ್ ಟ್ರಾಪ್ ನಲ್ಲಿ ಹೋಗಿ ಕಾಂಗ್ರೆಸ್ ನವರು ಬೀಳುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಮುಗಿಸಲು ದೇವೇಗೌಡರು ಟ್ರಾಪ್ ಮಾಡಿದ್ದಾರೆ. ಕಾಂಗ್ರೆಸ್ ಮುಕ್ತ ಕರ್ನಾಟಕ ತನ್ನಿಂದ ತಾನೇ ಆಗುತ್ತೆ. ಈ ಚುನಾವಣೆ ಕಾಂಗ್ರೆಸ್ ಮುಕ್ತ ಕರ್ನಾಟಕ ಆಗಲು ದೊಡ್ಡ ಮುನ್ನುಡಿಯನ್ನು ಬರೆಯಲಿದೆ ಎಂದು ಜೋಶಿ ವಾಗ್ದಾಳಿ ನಡೆಸಿದರು.
ದೇವೇಗೌಡರಿಗೆ ದೃತರಾಷ್ಟ್ರ ಮೋಹ ಶುರುವಾಗಿದೆ. ದೇವೇಗೌಡರ ಮಕ್ಕಳು, ಮೊಮ್ಮಕ್ಕಳ ಮೋಹದಲ್ಲಿ ಕೌರವ ಕುಲ ಹಾಳಾಗುತ್ತೆ. ಜೆಡಿಎಸ್ ತಾನು ಹಾಳಾಗುತ್ತೆ, ಕಾಂಗ್ರೆಸ್ ನ್ನು ಹಾಳು ಮಾಡುತ್ತೆ ಎಂದು ಆರೋಪಿಸಿದರು.
ಕಾಂಗ್ರೆಸ್ ಮುಗಿಸಲು ಕಾಂಗ್ರೆಸ್ ನಾಯಕರೇ ರೆಡಿಯಾಗಿದ್ದಾರೆ. ಇದರಲ್ಲಿ ಕಾಂಗ್ರೆಸ್ ರಾಜ್ಯ ನಾಯಕರು ಭಾಗಿಯಾಗಿದ್ದಾರೆ. ಅವರ ಹೆಸರುಗಳು ಮಾಧ್ಯಮಗಳ ಮೂಲಕವೇ ಹೊರ ಬೀಳಲಿವೆ ಎಂದು ಭವಿಷ್ಯ ನುಡಿದರು.