ಅರಣ್ಯದಲ್ಲಿ ನವಜಾತ ಶಿಶು ಪತ್ತೆ
ಮಂಡ್ಯ, ಎ.5: ಜನಿಸಿದ ಕೆಲವೇ ಗಂಟೆಯಲ್ಲಿ ತಾಯಿಯೊಬ್ಬಳು ಹೆಣ್ಣು ಮಗುವನ್ನು ಬ್ಯಾಗ್ಗೆ ಹಾಕಿ ಮದ್ದೂರು ತಾಲೂಕಿನ ಹೆಮ್ಮನಹಳ್ಳಿ ಬಳಿ ಅರಣ್ಯ ಪ್ರದೇಶದಲ್ಲಿ ಬಿಟ್ಟು ಹೋಗಿದ್ದಾಳೆ.
ಮಗುವಿನ ಚೀರಾಟ ಕೇಳಿಬಂದ ಹಿನ್ನೆಲೆಯಲ್ಲಿ ಸೋಮನಹಳ್ಳಿ ಗ್ರಾಮದ ವಿಮಲ್ ಎಂಬವರು ಸ್ಥಳಕ್ಕೆ ಹೋಗಿ ನೋಡಿದಾಗ ಮುದ್ದಾದ ಕಂದಮ್ಮ ಬ್ಯಾಗ್ನಲ್ಲಿ ಅಳುತ್ತಿತ್ತು. ತಕ್ಷಣ ಮಗುವನ್ನು ಎತ್ತಿಕೊಂಡು ಮನೆಗೆ ಹೋಗಿ ಆರೈಕೆ ಮಾಡಿದ ಅವರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದಾರೆ. ಬಳಿಕ ಸಿಡಿಪಿಒ ಚೇತನ್ ಹಾಗೂ ತಂಡ, ವಿಮಲ್ ಅವರ ಮನೆಗೆ ಭೇಟಿ ನೀಡಿ ಮಗುವನ್ನು ವಶಕ್ಕೆ ತೆಗೆದುಕೊಂಡು ಮದ್ದೂರಿನ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರು.
ಮುಂಜಾನೆ 4 ಗಂಟೆಯಲ್ಲಿ ಮಗು ಜನಿಸಿದೆ ಎಂದು ಚಿಕಿತ್ಸೆ ನೀಡಿದ ವೈದ್ಯರು ತಿಳಿಸಿದ್ದು, ಮಗುವನ್ನು ಮಂಡ್ಯದ ಮಕ್ಕಳ ಕಲ್ಯಾಣ ಸಮಿತಿಗೆ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮದ್ದೂರು ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story