ಬಾಗೇಪಲ್ಲಿ: ಈಜಲು ಹೋಗಿ ಬಾಲಕ ನೀರು ಪಾಲು
ಬಾಗೇಪಲ್ಲಿ, ಎ.5: ಕೆರೆಯಲ್ಲಿ ಈಜಾಡಲು ಹೋಗಿ ಬಾಲಕ ನೀರು ಪಾಲಾದ ಘಟನೆ ಪಟ್ಟಣದ ಗೂಳೂರು ರಸ್ತೆಯ ರೆಡ್ಡಿಕುಂಟೆ ಕೆರೆಯಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.
ನೇತಾಜಿ ವೃತ್ತ ನಿವಾಸಿ ರತ್ನಮ್ಮ ಎಂಬವರ ಮಗ ವಿವೇಕ್(7) ನೀರು ಪಾಲಾದ ಬಾಲಕ ಎಂದು ತಿಳಿದುಬಂದಿದೆ. ಬಾಲಕ 2ನೇ ತರಗತಿ ವ್ಯಾಸಂಗ ಮಾಡುತ್ತಿದ್ದು ಶಾಲೆಗೆ ರಜೆ ಇದ್ದ ಕಾರಣ ಸ್ನೇಹಿತರ ಜೊತೆ ಗುರುವಾರ ಮಧ್ಯಾಹ್ನ 3:30ರ ಸುಮಾರಿಗೆ ಈಜಾಡಲು ಹೋಗಿದ್ದ ಎನ್ನಲಾಗಿದೆ. ಈಜು ಬಾರದ ವಿವೇಕ್ ನೀರಿನಲ್ಲಿ ಮುಳಗಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಮಗ ಮನೆಗೆ ಬಾರದ ಕಾರಣ ರತ್ನಮ್ಮ ಗುರುವಾರ ತನ್ನ ಮಗ ಕಾಣೆಯಾಗಿದ್ದಾನೆಂದು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಶುಕ್ರವಾರ ಮಧ್ಯಾಹ್ನ 3ಗಂಟೆಗೆ ರತ್ನಮ್ಮ ಸಂಬಂಧಿಕರ ಜೊತೆಗೆ ಕೆರೆ ಬಳಿ ಹೋಗಿ ನೋಡಿದಾಗ ತನ್ನ ಮಗನ ಶರ್ಟ್, ನಿಕ್ಕರ್ ಹಾಗೂ ಚಪ್ಪಲಿ ಪತ್ತೆಯಾಗಿದೆ.
ಸ್ಥಳಕ್ಕೆ ಆಗ್ನಿ ಶಾಮಕ ಸಿಬ್ಬಂದಿ ಆಗಮಿಸಿ ದೋಣಿ ಮೂಲಕ ಪಾತಾಳ ಬೈರವಿ ಹಾಕಿ ನುರಿತ ಈಜುಗಾರರ ಸಹಕಾರದಿಂದ ಮೃತ ದೇಹವನ್ನು ಶುಕ್ರವಾರ ಸಂಜೆ 7:30ರ ಸುಮಾರಿಗೆ ಹೊರತೆಗೆದಿದ್ದಾರೆ ಎನ್ನಲಾಗಿದೆ.