‘ನೀರು ಕೊಟ್ಟು, ನಂತರ ಓಟು ಕೇಳಲು ಬನ್ನಿ’: ಅಭ್ಯರ್ಥಿಗಳಿಗೆ ಗ್ರಾಮಸ್ಥರ ಸವಾಲು
ಸಾಂದರ್ಭಿಕ ಚಿತ್ರ
ಬೆಳಗಾವಿ, ಎ. 9: ‘ಪ್ರಜಾಪ್ರಭುತ್ವಕ್ಕೆ ಮತಬೇಕು. ಮನುಷ್ಯ ಬದುಕಲು ನೀರು ಬೇಕು. ಹೀಗಾಗಿ ಮೊದಲು ನೀರು ಕೊಟ್ಟು ನಂತರ ವೋಟು ಕೇಳಲು ಬನ್ನಿ’ ಎಂದು ಜಿಲ್ಲೆಯ ಹುಕ್ಕೇರಿ ತಾಲೂಕಿನ ನಾಲ್ಕೈದು ಹಳ್ಳಿಗಳ ಗ್ರಾಮಸ್ಥರು ಅಭ್ಯರ್ಥಿಗಳಿಗೆ ಹೊಸ ಸವಾಲು ಹಾಕಿದ್ದಾರೆ.
ಮಂಗಳವಾರ ಪ್ರತಿಭಟನೆ ನಡೆಸಿದ ವಿವಿಧ ಗ್ರಾಮಗಳ ನೂರಾರು ಗ್ರಾಮಸ್ಥರು ನೀರು ಕೊಡುವವರೆಗೂ ನಾವು ಯಾವುದೇ ಕಾರಣಕ್ಕೂ ಮತದಾನ ಮಾಡುವುದಿಲ್ಲ. ಲೋಕಸಭೆ ಚುನಾವಣೆಯನ್ನು ಬಹಿಷ್ಕಾರ ಮಾಡುತ್ತೇವೆ ಎಂದು ಇದೇ ವೇಳೆ ಎಚ್ಚರಿಕೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ನೀಡಿದ್ದಾರೆ.
ಮೂವತ್ತು ವರ್ಷಗಳಿಂದಲೂ ನಾಲ್ಕೈದು ಗ್ರಾಮಗಳಿಗೆ ಸೂಕ್ತ ನೀರಿನ ವ್ಯವಸ್ಥೆ ಇಲ್ಲ. ಈ ಬಗ್ಗೆ ಜನಪ್ರತಿನಿಧಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದ ಆರೋಪಿಸಿದ ಗ್ರಾಮಸ್ಥರು, ಕುಡಿಯಲು ಮತ್ತು ಕೃಷಿಗೆ ನೀರು ಕೊಡುವವರೆಗೂ ನಾವು ಓಟು ಹಾಕುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಹಿಡಕಲ್ ಜಲಾಶಯದಿಂದ ಕುರಣಿ ಏತನೀರಾವರಿ ಯೋಜನೆ ನಿರ್ಮಾಣ ಮಾಡಲಾಗಿದೆ. ಈ ಗ್ರಾಮಗಳಿಂದ ಕುರಣಿ ಏತನೀರಾವರಿ ಯೋಜನೆಯ ನೀರೆತ್ತುವ ಜಾಗ ಇರುವುದು ಕೇವಲ 3 ಕಿ.ಮೀ ಅಷ್ಟೇ. ಆದರೆ ಅಲ್ಲಿಂದ ಇಲ್ಲಿಯವರೆಗೂ ನೀರು ಬಿಡುತ್ತಿಲ್ಲ. ಈ ಕೂಡಲೇ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಲಾಗಿದೆ.