ಅಧಿಕಾರದ ಆಸೆಗಾಗಿ ಜಾತಿ, ಪಂಥ ಕಟ್ಟುವುದೇ ಬಿಜೆಪಿ ಸಿದ್ದಾಂತ: ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್
ಚನ್ನಗಿರಿ,ಎ.17: ಅಧಿಕಾರದ ಆಸೆಗೋಸ್ಕರ ಜಾತಿ-ಪಂಥ ಕಟ್ಟುವುದೇ ಬಿಜೆಪಿ ಪಕ್ಷದ ಸಿದ್ದಾಂತವಾಗಿ ಬಿಟ್ಟಿದೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡ, ವಿಪ ಸದಸ್ಯ ಅಬ್ದುಲ್ ಜಬ್ಬಾರ್ ಹೇಳಿದರು.
ಇಲ್ಲಿನ ಜಾಮಿಯ ಶಾದಿಮಹಲ್ನಲ್ಲಿ ತುರ್ತು ಚುನಾವಣೆ ಸಭೆಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು. ಜಾತಿ ಒಡೆದು ರಾಜಕೀಯ ಮಾಡುವರಿಗೆ ಜನರು ಬುದ್ಧಿ ಕಲಿಸಲು ಒಳ್ಳೆಯ ಕಾಲ ಬಂದಿದೆ. ಇಂದಿನ ಜನರು ಸಾಕ್ಷರರಾಗಿದ್ದು ಪ್ರತಿಯೊಂದು ವಿಚಾರದ ಬಗ್ಗೆ ಯೋಚಿಸುತ್ತಿದ್ದಾರೆ. ಎಲ್ಲಾ ಪಕ್ಷದಲ್ಲಿಯೂ ಒಳ್ಳೆಯವರು, ಕೆಟ್ಟವರು ಇದ್ದಾರೆ. ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ನಮ್ಮ ಜಿಲ್ಲೆಗೆ ಡ್ಯಾಮ್ ನಿರ್ಮಿಸಿದ್ದೇವೆ. ಆಸ್ಪತ್ರೆಗಳನ್ನು ಉನ್ನತ ದರ್ಜೆಗೆ ಏರಿಸಲಾಗಿದೆ. ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ್ದು, ಹಲವಾರು ಶಾಶ್ವತ ಯೊಜನೆಗಳನ್ನು ನಮ್ಮ ಪಕ್ಷ ನೀಡಿದೆ. ಆದರೆ ಮೂರು ಬಾರಿ ಸಂಸದರಾದ ಸಿದ್ದೇಶ್ವರ್ ಯಾವ ಶಾಶ್ವತ ಯೋಜನೆ ತಂದಿದ್ದಾರೆ ಎಂದು ಹೇಳಲಿ. ಕೇವಲ ಮೋದಿ ಹೆಸರು ಹೇಳಿಕೊಂಡು ಚುನಾವಣೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಸಭೆಯಲ್ಲಿ ಜಿಲ್ಲಾ ವಕ್ಫ್ ಬೋರ್ಡ್ನ ಅಧ್ಯಕ್ಷ ಸಿರಾಜ್ ಅಹಮದ್, ತಾ.ಯುವ ಘಟಕದ ಪ್ರಧಾನ ಕಾರ್ಯದರ್ಶಿ ಎಸ್.ಕೆ ನದೀಮ್, ಸನಾವುಲ್ಲಾ ಇಲಿಯಾಜ್, ಇಜಾಜ್ ಅಹಮದ್, ಸಿರಾಜ್ ಅಹಮದ್, ಅಕ್ತರ್ ಉಪಸ್ಥಿತರಿದ್ದರು.