ಮೋದಿ ಪ್ರಧಾನಿ ಸ್ಥಾನದ ಗೌರವ ಬಿಟ್ಟು ಮಾತನಾಡುತ್ತಿದ್ದಾರೆ: ದೇವೇಗೌಡ ಟೀಕೆ
ವಿಜಯಪುರ, ಎ.20: ಪ್ರಧಾನಿ ನರೇಂದ್ರ ಮೋದಿ ತನ್ನ ಸ್ಥಾನದ ಗೌರವ ಬಿಟ್ಟು ಮಾತಾಡುತ್ತಿದ್ದಾರೆ. ನಾನೊಬ್ಬನೇ ಸ್ಟ್ರಾಂಗ್ ಮತ್ತು ಸ್ಥಿರ ಸರಕಾರ ನೀಡಬಲ್ಲೆ ಎಂಬ ಭ್ರಮೆ ಇದೆ. ಆ ರೀತಿ ಸುಮ್ಮನೆ ಬಂಬಡಾ ಹೊಡೆಯೋದರಲ್ಲಿ ಅರ್ಥ ಇಲ್ಲ ಎಂದು ಪ್ರಧಾನಿ ಮೋದಿ ವಿರುದ್ದ ಎಚ್.ಡಿ.ದೇವೇಗೌಡ ವಾಗ್ದಾಳಿ ನಡೆಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಟಲ್ ಬಿಹಾರಿ ವಾಜಪೇಯಿ ಮೋದಿಗಿಂತ ಉತ್ತಮ ಆಡಳಿತ ನೀಡಿದ್ದರು. ಇನ್ನು ನಾನು ಪ್ರಧಾನಿಯಾಗಿದ್ದ ಅವಧಿಯಲ್ಲೂ ಸುಭದ್ರ ಆಡಳಿತ ನೀಡಿದ್ದೆ. ಇತಿಹಾಸ ತಿರುಚಲು ಆಗುವುದಿಲ್ಲ. ಬಹುಮತ ಇದ್ದಾಗ್ಯೂ ಮೋದಿ ಸರಿಯಾದ ಆಡಳಿತ ನೀಡಲಿಲ್ಲ ಎಂದರು.
ಜೆಡಿಎಸ್ ಎಂದೂ ಉತ್ತರ ಕರ್ನಾಟಕ ನಿರ್ಲಕ್ಷ್ಯ ಮಾಡಿಲ್ಲ. ಇದೊಂದು ಕುತಂತ್ರ. ಉತ್ತರ ಕರ್ನಾಟಕದಲ್ಲಿ ದೇವೇಗೌಡ ಬೆಳಯಬಾರದೆಂಬ ಕಾರಣಕ್ಕೆ ಹೆಣೆದ ಕುತಂತ್ರ ಅಷ್ಟೆ. ನನ್ನನ್ನು ವಿರೋಧ ಮಾಡಿದವರು ಎಲ್ಲರೂ ಸ್ವರ್ಗದಲ್ಲಿದ್ದಾರೆ. ನಾನಿನ್ನೂ ಜೀವಂತ ಇದ್ದೇನೆ. ನನ್ನೊಂದಿಗೆ ದೈವ ಶಕ್ತಿ ಇದೆ ಎಂದು ದೇವೇಗೌಡ ವ್ಯಂಗ್ಯವಾಡಿದರು.
ಪ್ರಧಾನಿ ಆಕಾಂಕ್ಷಿ ತಾನಲ್ಲ:
ಮಾಯಾವತಿ, ಮಮತಾ ಬ್ಯಾನರ್ಜಿ, ಶರದ ಪವಾರ, ಚಂದ್ರಬಾಬು ನಾಯ್ಡು ಇನ್ನೂ ಅನೇಕರು ಪ್ರಧಾನಿಯಾಗುವ ಅರ್ಹತೆ ಹೊಂದಿದ್ದಾರೆ. ನಾನು ಪ್ರಧಾನಿ ಆಕಾಂಕ್ಷಿ ಅಲ್ಲ. ಕಾಂಗ್ರೆಸ್ ಬೆಂಬಲವಿಲ್ಲದೇ ಪ್ರಧಾನಿ ಆಗಲು ಸಾಧ್ಯವಿಲ್ಲ. ನಾವು ಈಗಾಗಲೇ ರಾಹುಲ್ ಗಾಂಧಿ ಅವರಿಗೆ ಬೆಂಬಲ ಸೂಚಿಸಿದ್ದೇವೆ ಎಂದು ದೇವೇಗೌಡ ತಿಳಿಸಿದರು.