"ಆರು ತಿಂಗಳ ಬಳಿಕ ಗೋಕಾಕ್ ಕ್ಷೇತ್ರದಲ್ಲಿ ಫೈನಲ್ ಮ್ಯಾಚ್"
ಸಹೋದರ ರಮೇಶ್ ಜಾರಕಿಹೊಳಿಗೆ ಪರೋಕ್ಷ ಎಚ್ಚರಿಕೆ ನೀಡಿದ ಸತೀಶ್ ಜಾರಕಿಹೊಳಿ
ರಮೇಶ್ ಜಾರಕಿಹೊಳಿ-ಸತೀಶ್ ಜಾರಕಿಹೊಳಿ
ಬೆಳಗಾವಿ, ಎ. 21: ಲೋಕಸಭೆ ಚುನಾವಣೆ ನಮಗೆ ಸೆಮಿಫೈನಲ್, ಇನ್ನು ಆರು ತಿಂಗಳ ಬಳಿಕ ಫೈನಲ್ ಮ್ಯಾಚ್(ಅಂತಿಮ ಪಂದ್ಯ) ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಸಹೋದರ ರಮೇಶ್ ಜಾರಕಿಹೊಳಿಗೆ ಪರೋಕ್ಷ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇಪ್ಪತ್ತು ವರ್ಷದಿಂದ ಗೋಕಾಕ್ ಕ್ಷೇತ್ರ ರಮೇಶ್ ಜಾರಕಿಹೊಳಿ ಹಿಡಿತದಲ್ಲಿತ್ತು. ಆದರೆ, ಇದೀಗ ಈ ಚುನಾವಣೆಯಲ್ಲಿ ಗೊಂದಲವಾಗಿದೆ. ಪಕ್ಷದ ಪರವಾಗಿರುವ ಕಾರ್ಯಕರ್ತರು ಗೋಕಾಕ್ನಲ್ಲಿ ಇದ್ದಾರೆ ಎಂದರು.
ರಮೇಶ್ ನಿನ್ನೆ ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಬಿಜೆಪಿ ಪರ ಕೆಲಸ ಮಾಡಲು ಸೂಚನೆ ನೀಡಿದ್ದಾರೆಂದು ಗೊತ್ತಾಗಿದೆ. ಗೋಕಾಕ್ ತಾಲೂಕಿನಲ್ಲಿ ಕಾಂಗ್ರೆಸ್ ಬೆಳೆಸಿದ್ದು ನಾನು. ಅನಂತರ ರಮೇಶ್ ಅವರ ಕೈಗೆ ಕೊಟ್ಟೆ. ಈ ಚುನಾವಣೆಯಲ್ಲಿ ಯಾರ ಶಕ್ತಿ ಏನೆಂದು ಗೊತ್ತಾಗಲಿದೆ ಎಂದರು.
ಗೋಕಾಕ್ ಕ್ಷೇತ್ರದ ಶಾಸಕರು ನಮ್ಮ ಪಕ್ಷದ ಜತೆಗಿಲ್ಲ. ಹೀಗಾಗಿ ನಾವು ಅನಿವಾರ್ಯವಾಗಿ ಕ್ಷೇತ್ರದಲ್ಲಿ ಪ್ರಚಾರ ನಡೆಸಬೇಕಾಗಿದೆ. ಈಗಾಗಲೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪಕ್ಷದಿಂದ ಹೊರಗೆ ಹೋಗಿದ್ದಾರೆ. ಹೀಗಾಗಿ ರಮೇಶ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಪೀಕರ್ಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ದೂರು ನೀಡಿದ್ದಾರೆ. ಜೊತೆಗೆ ಜಿಲ್ಲೆಯಲ್ಲಿ ಬೇರೆ-ಬೇರೆ ಸ್ಥಳದಲ್ಲಿ ರಮೇಶ್ ಜಾರಕಿಹೊಳಿ ಬಿಜೆಪಿ ಪರ ಕೆಲಸ ಮಾಡಿದ್ದಾರೆ. ಅವರ ಮೇಲೆ ಕ್ರಮ ಕೈಗೊಂಡರೂ, ಅಥವಾ ಯಾವುದೇ ಕ್ರಮ ಕೈಗೊಳ್ಳದಿದ್ದರೂ ಅಷ್ಟೇ. ಆದರೆ, ನಮ್ಮ ಪಕ್ಷವನ್ನು ಗೋಕಾಕ್ನಲ್ಲಿ ಗಟ್ಟಿಗೊಳಿಸುವ ಕೆಲಸ ಮಾಡುತ್ತೇವೆ ಎಂದರು.