ಪಕ್ಷಾಂತರ ಮಾಡುವವರು ನಾಯಿಗಿಂತ ಕಡೆ: ಏಕಾಂಗಿ ಪ್ರತಿಭಟನೆ ಮಾಡಿ ವಾಟಾಳ್ ನಾಗರಾಜ್ ಆಕ್ರೋಶ
ಮೈಸೂರು,ಎ.28: ಪಕ್ಷಾಂತರ ಮಾಡುವವರು ನಾಯಿಗಳಿಗಿಂತ ಕಡೆ ಎಂದು ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಮೈಸೂರು ರೈಲ್ವೆ ನಿಲ್ದಾಣದ ಬಳಿ ರವಿವಾರ ಪಕ್ಷಾಂತರ ಮಾಡುವ ರಾಜಕೀಯ ಪಕ್ಷಗಳ ನಾಯಕರ ವಿರುದ್ಧ ಏಕಾಂಗಿ ಪ್ರತಿಭಟನೆ ಮಾಡಿದರು.
ನಂತರ ಮಾಧ್ಯಮದವರೊಂದಿತೆ ಮಾತನಾಡಿದ ಅವರು, ಪಕ್ಷಾಂತರ ಮಾಡುವವರು ನಾಯಿಗಳಿಗಿಂತ ಕಡೆ. ಅಂತಹ ನಾಯಕರಿಗೆ 10 ವರ್ಷ ಪಕ್ಷದಿಂದ ವಜಾ, ಎರಡು ವರ್ಷ ಜೈಲು ಶಿಕ್ಷೆ ನೀಡಬೇಕು. ಚುನಾವಣೆಗೆ ರಾಜ್ಯದಲ್ಲಿ ಎಲ್ಲಾ ಪಕ್ಷದವರು ನಾಲ್ಕು ಸಾವಿರ ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿದ್ದಾರೆ. ಚುನಾವಣಾ ಆಯೋಗ ಕಣ್ಣುಮುಚ್ಚಿ ಕುಳಿತಿದಿಯೇ ಎಂದು ಪ್ರಶ್ನಿಸಿದ ಅವರು, ಈ ಚುನಾವಣೆಯನ್ನು ರದ್ದು ಮಾಡಿ ಮತ್ತೆ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದರು.
ಈಗ ನಡೆಯುತ್ತಿರುವ ಚುನಾವಣೆ ಹಣ, ಜಾತಿ ಬಲದ ಮೇಲೆ ನಡೆಯುತ್ತಿದೆ. ಜನಸಾಮಾನ್ಯರು ಚುನಾವಣೆಗೆ ಸ್ಪರ್ಧೆ ಮಾಡಲು ಸಾಧ್ಯವಿಲ್ಲ. ಈ ಹಿಂದೆ ಚುನಾವಣೆಗೆ ಠೇವಣಿಯಾಗಿ 500 ರೂ. ಇಡಲಾಗುತ್ತಿತ್ತು. ಈಗ ಚುನಾವಣೆಗೆ 25 ಸಾವಿರ ರೂ. ಠೇವಣಿ ಇಡಬೇಕಾಗಿದೆ. ಇದರಿಂದ ಸಾಮಾನ್ಯ ಜರು ಚುನಾವಣೆಗೆ ಸ್ಪರ್ಧೆ ಮಾಡಲು ಆಗುತ್ತಿಲ್ಲ. ಮುಂದಿನ ದಿನಗಳಲ್ಲಿ ಚುನಾವಣೆ ಬಗ್ಗೆ ಜನರಲ್ಲಿ ಹತಾಶ ಭಾವನೆ ಮೂಡುತ್ತದೆ ಎಂದು ಹೇಳಿದರು.