ಜಮೀನಿಗೆ ಕಾಡಾನೆ ದಾಳಿ: ಅಪಾರ ನಷ್ಟ
ಹನೂರು,ಮೇ 3: ಕಾಡಾನೆಯೊಂದು ಜಮೀನಿಗೆ ಲಗ್ಗೆ ಇಟ್ಟು ನೀರಿನ ಪೈಪ್ಲೈನ್ಗಳಿಗೆ ಹಾನಿಗೊಳಿಸಿರುವ ಘಟನೆ ಹನೂರು ಬಫರ್ ವಲಯದ ರಾಮನಗುಡ್ಡ ಬಳಿ ಗುರುವಾರ ತಡ ರಾತ್ರಿ ನಡೆದಿದೆ.
ಬಿ.ಗುಂಡಾಪುರ ಗ್ರಾಮದ ನಿವಾಸಿ ಹೊಂಗಯ್ಯನವರಿಗೆ ಸೇರಿದ ಜಮೀನಿಗೆ ತಡ ರಾತ್ರಿ ಆನೆ ಲಗ್ಗೆ ಇಟ್ಟಿದ್ದು, ಸಾವಿರಾರು ರೂ. ಬೆಲೆಬಾಳುವ ಪೈಪ್ಲೈನ್ಗಳನ್ನು ಹೊಡೆದು ಹಾಕಿದೆ. ಅದೃಷ್ಟ ಎಂಬಂತೆ ಕಾಯಿಗಟ್ಟುವ ಹಂತದಲ್ಲಿದ್ದ ಜೋಳದ ಬೆಳೆಯನ್ನು ಹಾದು ಹೋಗಿರುವ ಕಾಡಾನೆ ಮುಸುಕಿನ ಜೋಳದ ಬೆಳೆಯನ್ನು ತಿನ್ನದೇ ಪಕ್ಕದಲ್ಲೇ ಇದ್ದ ನೀರಿನ ಪೈಪ್ಲೈನ್ನ್ನು ಹೊಡೆದು ಹಾಕಿದೆ.
ಭಯಭೀತರಾದ ರೈತ ಕುಟುಂಬ: ರಾಮನಗುಡ್ಡ ಬಳಿಯ ಕಾಡಂಚಿನ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿರುವ ರೈತ ಕುಟುಂಬ ಕಾಡು ಪ್ರಾಣಿಗಳ ದಾಳಿಯಿಂದ ನಷ್ಟ ಅನುಭವಿಸುತ್ತಿದ್ದು, ಮತ್ತೊಂದಡೆ ಆನೆಗಳ ದಾಳಿಯಿಂದ ಭಯ ಭೀತರಾಗಿದ್ದಾರೆ.
ಕ್ರಮಕ್ಕೆ ಒತ್ತಾಯ: ಕಾಡು ಹಂದಿ, ಜಿಂಕೆ, ಕಡವೆ, ಜಮೀನಿಗೆ ಬಂದು ಚೆನ್ನಾಗಿ ಬೆಳೆದಿದ್ದ ಬೆಳೆಯನ್ನು ತಿಂದು ಹಾಕಿದ್ದವು. ಅಳಿದುಳಿದ ಬೆಳೆಯು ಕೈ ಸೇರುವ ಆಸೆಯಿಲ್ಲಿದ್ದ ನಮಗೆ ಆನೆ ದಾಳಿಯಿಂದ ಭಯದ ಜೊತೆಗೆ ನಷ್ಟವನ್ನು ಅನುಭವಿಸುವಂತೆ ಆಗಿದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅರಣ್ಯಾಧಿಕಾರಿಗಳು ಕೂಡಲೇ ಕಾಡು ಪ್ರಾಣಿಗಳ ಹಾವಳಿಯನ್ನು ತಡೆಗಟ್ಟಬೇಕು. ಉಂಟಾಗಿರುವ ನಷ್ಟವನ್ನು ಪರಿಶೀಲಿಸಿ ಪರಿಹಾರ ಒದಗಿಸಬೇಕೆಂದು ರೈತ ಶಿವಣ್ಣ ಒತ್ತಾಯಿಸಿದ್ದಾರೆ.