ವಿಶ್ರಾಂತಿಗಾಗಿ ಸಿಎಂ ಕುಮಾರಸ್ವಾಮಿ ರೆಸಾರ್ಟ್ ಗೆ: ಸಚಿವ ಸಾ.ರಾ.ಮಹೇಶ್
ಮಡಿಕೇರಿ, ಮೇ 11: ಮುಖ್ಯಮಂತ್ರಿ ಇರಬಹುದು, ಸಚಿವರೇ ಇರಬಹುದು, ಎಲ್ಲರಿಗೂ ತಮ್ಮದೇ ಆದ ಖಾಸಗಿ ಜೀವನ ಇರುತ್ತದೆ. ಒಮ್ಮೊಮ್ಮೆ ಯಂತ್ರಗಳು ಕೂಡಾ ಕೆಟ್ಟು ಹೋಗುತ್ತವೆ. ಅದಕ್ಕೂ ರೆಸ್ಟ್ ಬೇಕಾಗುತ್ತದೆ. ನಮಗೂ ವಿಶ್ರಾಂತಿಯ ಅನಿವಾರ್ಯತೆ ಇರುತ್ತದೆ. ವಿಶ್ರಾಂತಿಗಾಗಿ ಸಿಎಂ ಕುಮಾರಸ್ವಾಮಿ ರೆಸಾರ್ಟ್ಗೆ ಬಂದಿದ್ದಾರೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಸಮರ್ಥಿಸಿಕೊಂಡಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಭೀಕರ ಬರಗಾಲದ ನಡುವೆಯೇ ಸಿಎಂ ಕುಮಾರಸ್ವಾಮಿ ಅವರು ಇಬ್ಬನಿ ರೆಸಾರ್ಟ್ನಲ್ಲಿ ತಂಗಿರುವುದನ್ನು ಸಮರ್ಥಿಸಿಕೊಂಡರು. ಮಡಿಕೇರಿ ಈಗ ವಾಸ್ತವ್ಯಕ್ಕೆ ಸುರಕ್ಷಿತ ಎಂದು ರಾಜ್ಯದ ಜನತೆಗೆ ತಿಳಿಸುವ ಉದ್ದೇಶದಿಂದ ಮಾಜಿ ಸಿಎಂ ಹಾಗೂ ಹಾಲಿ ಸಿಎಂ ಒಂದೇ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ. ನಾಳೆಯಿಂದ ಎಂದಿನಂತೆ ಸರ್ಕಾರಿ ಕಾರ್ಯಕ್ರಮಗಳು ನಡೆಯಲಿವೆ ಎಂದು ಸಾ.ರಾ.ಮಹೇಶ್ ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿಗಳ ಆದೇಶದ ಹಿನ್ನೆಲೆಯಲ್ಲಿ ಮಡಿಕೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದೇನೆ ಎಂದರು. ಬಿಜೆಪಿಯವರು ಸರ್ಕಾರ ರಚಿಸಿದ ದಿನದಿಂದಲೂ ಸರ್ಕಾರ ಬೀಳುತ್ತದೆ ಎಂದು ಹೇಳುತ್ತಾ ಬರುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಯಾವುದೇ ರಾಜಕೀಯ ಬದಲಾವಣೆ ಆಗುವುದಿಲ್ಲ ಎಂದು ಹೇಳಿದರು.