ಫೆ.14 ರ ಬದಲು ಮೇ 12ರಂದು ಬರ್ತ್ ಡೇ ಆಚರಿಸಿದ ಲಕ್ಷ್ಮಿ ಹೆಬ್ಬಾಳ್ಕರ್
ಜನ್ಮದಿನ ಬದಲಾವಣೆಗೆ ಶಾಸಕಿ ನೀಡಿದ ಕಾರಣ ಏನು ಗೊತ್ತೇ ?
ಬೆಳಗಾವಿ, ಮೇ 12: ಕಳೆದ ವರ್ಷ ಮೇ 12ರಂದು ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಮತದಾರರು ರಾಜಕೀಯವಾಗಿ ಪುನರ್ಜನ್ಮ ನೀಡಿದ ಹಿನ್ನೆಲೆಯಲ್ಲಿ ಇಂದು ನನ್ನ ಜನ್ಮ ದಿನ ಬದಲಾವಣೆ ಮಾಡಿಕೊಂಡಿದ್ದೇನೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.
ರವಿವಾರ ನಗರದ ಲಕ್ಷ್ಮಿ ಟೆಕಡಿಯ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಾದ ಪಡೆದ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. 'ನನ್ನ ಜನ್ಮ ದಿನಾಂಕ ಫೆಬ್ರವರಿ 14. ಆದರೆ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಮತದಾರರು ಕಳೆದ ಮೇ 12ರ ವಿಧಾನಸಭಾ ಚುನಾವಣೆಯ ಫಲಿತಾಂಶದಂದು ಲಕ್ಷಕ್ಕೂ ಅಧಿಕ ಮತಗಳಿಂದ ಗೆಲ್ಲಿಸಿ ರಾಜಕೀಯದಲ್ಲಿ ಮರು ಹುಟ್ಟು ನೀಡಿದ ಅವರ ಕೃತಜ್ಞತೆಯ ಸಲುವಾಗಿ ಇಂದು ನನ್ನ ಜನ್ಮ ದಿನಾಚರಣೆ ಆಚರಿಸಿಕೊಳ್ಳುತ್ತಿದ್ದೇನೆ ಎಂದು ಅವರು ಹೇಳಿದರು.
ಕಾಕತಾಳಿಯ ಎನ್ನುವಂತೆ ಇಂದು ವಿಶ್ವ ಅಂತರ್ರಾಷ್ಟ್ರೀಯ ತಾಯಂದಿರ ದಿನಾಚರಣೆ ಇರುವುದರಿಂದ ಇಂದೇ ನನ್ನ ಗ್ರಾಮೀಣ ಕ್ಷೇತ್ರದ ಮತದಾರರು ಪ್ರಚಂಡ ಬಹುಮತಗಳಿಂದ ಗೆಲ್ಲಿಸಿಕೊಟ್ಟಿದ್ದಾರೆ. ಇದು ನನ್ನ ಪುಣ್ಯ. ನಾನು ಅವರ ಮನೆಯ ಮಗಳಾಗಿ ಸೇವೆ ಸಲ್ಲಿಸುತ್ತೇನೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.
ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಇಂದು ವಿಶ್ವ ತಾಯಂದಿರ ದಿನಾಚರಣೆ. ಮತದಾನದ ಫಲಿತಾಂಶದ ದಿನದಂದು ತಮ್ಮ ಜನ್ಮದಿನದಂದು ಆಚರಿಸಿಕೊಳ್ಳುತ್ತಿರುವುದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಒಬ್ಬರೇ ಎಂದರು. ಲಕ್ಷ್ಮಿ ಹೆಬ್ಬಾಳ್ಕರ್ ಕೇವಲ ಒಂದು ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅಧಿಕಾರ ಬರುತ್ತದೆ, ಹೋಗುತ್ತದೆ. ನಿರಂತರ ಜನರ ಸಂಪರ್ಕದಲ್ಲಿದ್ದುಕೊಂಡು ಅವರ ಕಷ್ಟಗಳನ್ನು ಆಲಿಸಬೇಕು ಎಂದು ಅವರು ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ವೀರುಪಾಕ್ಷಯ್ಯ ನೀರಲಿಗಿಠ, ಶರಥ್ ಪಾಟೀಲ, ಅರವಿಂದ ಜೋಶಿ, ಡಾ.ನಂದೀಶ್, ಬಾಳಗೌಡ ಪಾಟೀಲ್, ಉದಯ ಹುಲಿಕಾಂತಿಮಠ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.