ಮಂಡ್ಯ: ಬಿಜೆಪಿ ಮುಖಂಡರ ಹೇಳಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ
ಮಂಡ್ಯ, ಮೇ 18: ಮಹಾತ್ಮ ಗಾಂಧಿಯನ್ನು ಕೊಂದ ನಾಥೂರಾಂ ಗೋಡ್ಸೆ ದೇಶ ಭಕ್ತ ಎಂದು ಕೆಲವು ಬಿಜೆಪಿ ಮುಖಂಡರು ಹೇಳಿರುವುದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ನಗರದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು.
ಪ್ರಜ್ಞಾಸಿಂಗ್, ನಳಿನ್ ಕುಮಾರ್ ಕಟೀಲು, ಅನಂತಕುಮಾರ ಹೆಗಡೆ ಮೊದಲಾದ ಬಿಜೆಪಿ ಮುಖಂಡರು ನಾಥೂರಾಂ ಗೋಡ್ಸೆ ದೇಶ ಭಕ್ತನೆಂದು ಹೇಳಿರುವುದಲ್ಲದೆ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಗೆ ಅಪಮಾನ ಮಾಡಿದ್ದಾರೆಂದು ಅವರು ಕಿಡಿಕಾರಿದರು.
ಇಡೀ ವಿಶ್ವವೇ ಗಾಂಧೀಜಿ ಅವರ ಕೊಡುಗೆಯನ್ನು ಶ್ಲಾಘಿಸಿ ಗೌರವಿಸಿದೆ. ಆದರೆ, ಬಿಜೆಪಿ ಮುಖಂಡರು ರಾಜಕಾರಣಕ್ಕೋಸ್ಕರ ಗಾಂಧೀಜಿ ಕೊಂದವವನನ್ನು ದೇಶಭಕ್ತ ಎಂದು ಹೇಳಿ ಜನರನ್ನು ದಿಕ್ಕುತಪ್ಪಿಸುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ದೇಶದ್ರೋಹದಂತ ಹೇಳಿಕೆ ನೀಡಿರುವ ಬಿಜೆಪಿ ಮುಖಂಡರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಸಮಾಜ ಒಡೆಯುವಂತಹ ಇಂತಹ ಹೇಳಿಕೆ ನೀಡದಂತೆ ಕಡಿವಾಣ ಹಾಕಬೇಕು ಎಂದು ಅವರು ಒತ್ತಾಯಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಆತ್ಮಾನಂದ, ಸುದರ್ಶನ್, ಟಿ.ಕೆ.ರಾಮಲಿಂಗಯ್ಯ, ಗುರುರಾಜ್, ನಯೀಂ, ಕಮಲಾರಾಜು, ಶಿವರಾಂ, ಗುರು, ಬಿ.ಪಿ.ಪ್ರಕಾಶ್, ಇತರ ಮುಖಂಡರು ಭಾಗವಹಿಸಿದ್ದರು.