ಉಪ್ಪಾರ ಜನಾಂಗದ ಅಭಿವೃದ್ದಿಗೆ ಕಾಂಗ್ರೆಸ್ ಕೊಡುಗೆ ಅಪಾರ: ಸಚಿವ ಸಿ.ಪುಟ್ಟರಂಗಶೆಟ್ಟಿ
ಹನೂರು: ಉಪ್ಪಾರ ಜನಾಂಗದ ಅಭಿವೃದ್ದಿಗೆ ಕಾಂಗ್ರೆಸ್ ಪಕ್ಷದ ಕೊಡುಗೆ ಅಪಾರವಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು.
ಹನೂರು ಪಟ್ಟಣ ಪಂಚಾಯತ್ ಚುನಾವಣೆಯ ನಿಮಿತ್ತ ಆರ್ಎಸ್ ದೂಡ್ಡಿ ಬಡಾವಣೆಗಳಲ್ಲಿ ಮುಖಂಡರ ಬೇಟಿ ಸಂದರ್ಭದಲ್ಲಿ ಮಾತನಾಡಿದ ಅವರು
ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿರುವ ಸಣ್ಣ ಪುಟ್ಟ ಸಮುದಾಯಗಳನ್ನು ಗುರುತಿಸಿ ಅವರಿಗೆ ಸಾಮಾಜಿಕ ನ್ಯಾಯವನ್ನು ಕೊಡಿಸುವ ಕೆಲಸವನ್ನು ನಮ್ಮ ಕಾಂಗ್ರೆಸ್ ಸರ್ಕಾರ ಅವಧಿಗಳಲ್ಲಿ ಮಾಡುತ್ತಾ ಬಂದಿದೆ. ಅಲ್ಲದೆ ಕಳೆದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯರವರು ಭಗಿರಥ ಜಯಂತಿ ಕಾರ್ಯಕ್ರಮವನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸುವ ಮೂಲಕ ಹಿಂದುಳಿದ ಉಪ್ಪಾರ ಜನಾಂಗವನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಿದ್ದಾರೆ. ನನ್ನನ್ನು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿಯನ್ನಾಗಿ ಮಾಡುವ ಮೂಲಕ ಸಾಮಾಜಿಕ ನ್ಯಾಯವನ್ನು ಒದಗಿಸಿದ ಪಕ್ಷ ನಮ್ಮ ಕಾಂಗ್ರೆಸ್ ಪಕ್ಷವಾಗಿದೆ ಎಂದು ಹೇಳಿದರು.
ಈ ವೇಳೆ ಕೆಲ ಮುಖಂಡರು ಉಪ್ಪಾರ ಜನಂಗಕ್ಕೆ ಸಮುದಾಯ ಭವನ, ಎಲ್ಲಾ ಬಡಾವಣೆಗಳಲ್ಲಿ ರಸ್ತೆ, ಸ್ಮಶಾನಕ್ಕೆ ಮಂಜೂರು ಮಾಡಿಸಿ ಕೊಡುವಂತೆ ಮೌಖಿಕವಾಗಿ ಬೇಡಿಕೆ ಇಟ್ಟರು. ಇದಕ್ಕೆ ಸ್ಪಂದಿಸಿದ ಸಚಿವರು ನೀತಿ ಸಂಹಿತೆ ಮುಗಿದ ಬಳಿಕ ಶಾಸಕ ನರೇಂದ್ರರ ಜೊತೆ ಚರ್ಚಿಸಿ ಮುಂದಿನ ದಿನಗಳಲ್ಲಿ ನಿಮ್ಮ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪಪಂ ಉಪಾಧ್ಯಕ್ಷ ಬಸವರಾಜು, ಪಪಂ ಮಾಜಿ ಅಧ್ಯಕ್ಷ ಮುದುಗಾಮಶೆಟ್ಟಿ, ಮುಖಂಡರಾದ ರಂಗರಾಜು, ಮುನ್ನವರಪಾಷ, ನಿಂಗೇಗೌಡ, ಸೋಮಶೇಖರ್ ಸೇರಿದಂತೆ ಹಲವರು ಹಾಜರಿದ್ದರು.