ಇದು ಟೀಸರ್, ಮೇ 23ರ ನಂತರ ಸಿನಿಮಾ ಬಿಡುಗಡೆಯಾಗಲಿದೆ: ಬೇಗ್ ಹೇಳಿಕೆಗೆ ಆರ್.ಅಶೋಕ್ ಲೇವಡಿ
ಬೆಂಗಳೂರು, ಮೇ 21: ಮಾಜಿ ಸಚಿವ ರೋಷನ್ ಬೇಗ್ ಹೊಸ ಸಿನಿಮಾ ಟೀಸರ್ ಬಿಡುಗಡೆ ಮಾಡಿದ್ದು, ಅದರಲ್ಲಿ ಇಬ್ಬರು ಖಳನಾಯಕರನ್ನು ತೋರಿಸಿದ್ದಾರೆ. ಕಾಂಗ್ರೆಸ್ನಲ್ಲಿ ‘ನಾಯಕರೇ’ ಇಲ್ಲ. ಅಲ್ಲಿ ಬರೀ ಖಳನಾಯಕರು, ಹಾಸ್ಯಗಾರರಷ್ಟೇ ಇದ್ದಾರೆ ಎಂದು ಬಿಜೆಪಿ ಶಾಸಕ ಆರ್.ಅಶೋಕ್ ಲೇವಡಿ ಮಾಡಿದ್ದಾರೆ.
ಮಂಗಳವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಟೀಸರ್ನಲ್ಲಿ ಮುಖ್ಯ ಖಳನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಹಾಸ್ಯಗಾರ. ಮೇ 23ರ ನಂತರ ಸಿನಿಮಾ ಬಿಡುಗಡೆಯಾಗಲಿದೆ ಎಂದು ವ್ಯಂಗ್ಯವಾಡಿದರು.
ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಗೊಳ್ಳಲಿರುವ ಮೇ 23 ಬಿಜೆಪಿಗೆ ಸಂಭ್ರಮದ ದಿನ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳ ಮುಖಂಡರು ರೆಸಾರ್ಟ್ ಕಡೆಗೆ ಓಡುವ ದಿನ ಎಂದ ಅವರು, ಇನ್ನು ಬಳ್ಳಾರಿ, ಬೆಳಗಾವಿ ಸಿನಿಮಾಗಳು ಬಿಡುಗಡೆ ಬಾಕಿ ಇದೆ ಎಂದು ಹೇಳಿದರು.
ಮೇ 23ಕ್ಕೆ ಮೈತ್ರಿ ಪಕ್ಷಗಳ ಲಾವಾರಸ ಉಕ್ಕಿ ಯಾರ ಮೇಲೆ ಹರಿಯುತ್ತದೆಯೋ ಗೊತ್ತಿಲ್ಲ. ಭೂಕಂಪ ಆಗಿ ಕಾಂಗ್ರೆಸ್ ಮನೆ ಬಿದ್ದು ಹೋಗಲಿದೆ. ಕಾಂಗ್ರೆಸ್ಸಿನವರೇ ಈ ಸಿನಿಮಾ ನಿರ್ಮಾಪಕರಾಗಿದ್ದು, ಮೇ 23ಕ್ಕೆ ಮೈತ್ರಿ ಸರಕಾರ ಸತ್ತು ಹೋಗುತ್ತದೆ ಎಂದು ವೈದ್ಯರು ಘೋಷಣೆ ಮಾಡಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.