ಎಚ್.ವಿಶ್ವನಾಥ್ ಮೈತ್ರಿಗೆ ವಿರುದ್ಧವಾದ ಹೇಳಿಕೆಗಳನ್ನು ನೀಡಬಾರದು: ಮಾಜಿ ಸಚಿವ ಎಚ್.ಸಿ.ಮಹದೇವಪ್ಪ
ಮೈಸೂರು,ಮೇ.22: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಹಿರಿಯ ನಾಯಕರು. ಅವರು ಮೈತ್ರಿಗೆ ವಿರುದ್ಧವಾದ ಹೇಳಿಕೆಗಳನ್ನು ನೀಡಬಾರದು ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಮನ್ವಯ ಸಮಿತಿ ಅಧ್ಯಕ್ಷರಾಗಿ ಮಾಜಿ ಸಿಎಂ ಸಿದ್ದರಾಮಯ್ಯ ವಿಫಲರಾಗಿದ್ದಾರೆ ಎಂದು ಹೇಳಿಕೆ ನೀಡಿರುವ ಎಚ್.ವಿಶ್ವನಾಥ್ ಹೇಳಿಕೆಗೆ ತಿರುಗೇಟು ನೀಡಿದರು.
ವಿಶ್ವನಾಥ್ ಅವರು ಅವರು ಪಕ್ಷವನ್ನು ಒಗ್ಗೂಡಿಸುವ ಕೆಲಸ ಮಾಡಬೇಕು. ಅದನ್ನು ಬಿಟ್ಟು ಈ ರೀತಿಯ ಹೇಳಿಕೆಯನ್ನು ಕೊಡಬಾರದು ಎಂದರು. ರೋಷನ್ ಬೇಗ್ ಯಾವ ಉದ್ದೇಶ ಇಟ್ಟುಕೊಂಡು ಹೇಳಿಕೆ ನೀಡಿದ್ದಾರೆ ಗೊತ್ತಿಲ್ಲ. ಸಿದ್ದರಾಮಯ್ಯ ದಕ್ಷ, ನಿಷ್ಠಾವಂತ ನಾಯಕ. ರೋಷನ್ ಬೇಗ್ ಹಿರಿಯ ನಾಯಕರು. ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಅಧಿಕಾರ ಅನುಭವಿಸಿದವರು. ಈಗ ರಾಜಕೀಯ ದುರುದ್ದೇಶದಿಂದ ಈ ರೀತಿ ಹೇಳಿಕೆ ನೀಡಿದ್ದಾರೆ. ರೋಷನ್ ಬೇಗ್ ಮನಸ್ಸಿನಲ್ಲಿ ಏನಿದೆ ಎಂದು ಅವರನ್ನೇ ಕೇಳಬೇಕು. ರಾಜಕೀಯದಲ್ಲಿ ಯಾವ ಸಂದರ್ಭದಲ್ಲಿ ಏನಾಗುತ್ತೆ ಗೊತ್ತಾಗಲ್ಲ. ಯಾರು ಎಲ್ಲೋಗುತ್ತಾರೆ ಎಂದು ತಿಳಿಯುವುದಿಲ್ಲ ಎಂದು ಹೇಳಿದರು.
ಎಲ್ಲಾ ಸಮೀಕ್ಷೆಗಳನ್ನು ನಂಬಲು ಆಗಲ್ಲ. ಸಮೀಕ್ಷೆಗಿಂತ ನಮಗೆ ಜನರ ನಾಡಿಮಿಡಿತ ಮುಖ್ಯ. ನಾಳೆ ಎಲ್ಲಾ ಸಮೀಕ್ಷೆಗಳಿಗೆ ಉತ್ತರ ಸಿಗಲಿದೆ. ನಾನು ಮೊದಲೂ ಹೇಳಿದ್ದೇ ಈಗಲೂ ಹೇಳುತ್ತೇನೆ. ಕರ್ನಾಟಕದಲ್ಲಿ 16 ರಿಂದ 18 ಸೀಟುಗಳನ್ನು ಮೈತ್ರಿ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ಹೇಳಿದರು.