ಪ್ರಿಯಕರನ ಜತೆ ಸೇರಿ ಪತಿಯ ಕೊಲೆ: ನಾಲ್ವರು ಆರೋಪಿಗಳ ಬಂಧನ
ಮಂಡ್ಯ, ಮೇ 31: ಅನೈತಿಕ ಸಂಬಂಧದ ಹಿನ್ನ್ನೆಲೆಯಲ್ಲಿ ಪ್ರಿಯಕರನ ಜೊತೆಗೂಡಿ ಪತ್ನಿ ಪತಿಯನ್ನೇ ಕೊಲೆ ಮಾಡಿಸಿ ಹೂತು ಹಾಕಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಅರೆಕೆರೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸತೀಶ್(40) ಕೊಲೆಯಾದ ಪತಿ. ಪತ್ನಿ ಕಾವ್ಯ ಕೊಲೆ ಮಾಡಿರುವ ಆರೋಪಿಯಾಗಿದ್ದಾಳೆ. ತನ್ನ ಪ್ರಿಯಕರ ಮಂಜ ಎಂಬವನ ಜೊತೆಗಿನ ಅನೈತಿಕ ಸಂಬಂಧಕ್ಕಾಗಿ ಮಂಜನ ಸ್ನೇಹಿತರಾದ ಗುರು ಹಾಗೂ ಶ್ರೀಕಾಂತ ಎಂಬವರ ಜೊತೆ ಸೇರಿ ಪತಿಯನ್ನು ಕೊಲೆಗೈದು ಗ್ರಾಮದ ಕೆರೆ ದಡದಲ್ಲಿ ಹೂತು ಹಾಕಿದ್ದಾರೆ ಎನ್ನಲಾಗಿದ್ದು, ಗಂಡ ಒಂದು ವಾರದಿಂದ ನಾಪತ್ತೆಯಾಗಿದ್ದಾರೆ ಎಂದು ಪತ್ನಿ ಕಾವ್ಯ ಮೇ 23ರಂದು ಅರೆಕೆರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು.
ಪ್ರಕರಣದ ಬೆನ್ನತ್ತಿದ ಪೊಲೀಸರಿಗೆ ಕಾವ್ಯಾಳ ಮೊಬೈಲ್ನಿಂದ ಮಂಜನಿಗೆ ಹೆಚ್ಚು ಬಾರಿ ಮೊಬೈಲ್ ಕರೆ ಹೋಗಿದ್ದರಿಂದ ಅನುಮಾನಗೊಂಡು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಕೃತ್ಯದಲ್ಲಿ ಭಾಗಿಯಾದ ನಾಲ್ವರಲ್ಲಿ ಪ್ರಿಯಕರ ಮಂಜ, ಆತನ ಸಹಚರರಾದ ಗುರು, ಶ್ರೀಕಾಂತ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣ ಬೇಧಿಸಿರುವ ಅರಕೆರೆ ಪೊಲೀಸರು ಶುಕ್ರವಾರ ಸ್ಥಳಕ್ಕೆ ಆರೋಪಿಗಳನ್ನು ಕರೆದೊಯ್ದು ಪಾಂಡವಪುರ ಉಪವಿಭಾಗಾಧಿಕಾರಿ ಶೈಲಜಾ ನೇತೃತ್ವದಲ್ಲಿ ಮೃತದೇಹವನ್ನು ಹೊರ ತೆಗೆದು ಪಂಚನಾಮೆ ನಡೆಸಿದ್ದಾರೆ.