ಕಾಂಗ್ರೆಸ್ ನ ಕಡೆಗಣನೆಗೆ ಬೇಸತ್ತು ಬಿಜೆಪಿ ಸೇರ್ಪಡೆಗೆ ನಿರ್ಧಾರ: ಮೂಡಿಗೆರೆ ಪಪಂ ಮಾಜಿ ಅಧ್ಯಕ್ಷ ಅಲ್ತಾಫ್
ಮೂಡಿಗೆರೆ, ಜೂ.8: ಕಾಂಗ್ರೆಸ್ ಪಕ್ಷದಲ್ಲಿ ನಿರಂತರವಾಗಿ ಕಡೆಗಣಿಸಿದ್ದು, ಇದರಿಂದ ಬೇಸತ್ತು ಬಿಜೆಪಿ ಸೇರ್ಪಡೆಗೊಳ್ಳಲು ನಿರ್ಧರಿದ್ದೇನೆ ಎಂದು ಪಪಂ ಚುನಾವಣೆಯಲ್ಲಿ ಟಿಕೆಟ್ ವಂಚಿತರಾಗಿ ಸ್ವತಂತ್ರ್ಯ ಅಭ್ಯರ್ಥಿಯಾಗಿ 9ನೇ ವಾರ್ಡ್ಗೆ ಸ್ಪರ್ಧಿಸಿ ಪರಾಜಿತರಾಗಿರುವ ಪಪಂ ಮಾಜಿ ಅಧ್ಯಕ್ಷ ಅಲ್ತಾಫ್ ತಿಳಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಬೆಲೆಯಿಲ್ಲ. ನಾನು ಕಳೆದ 2005ರಿಂದ ಸತತ ಮೂರು ಬಾರಿ ನಡೆದ ಚುನಾವಣೆಗೆ ಕಾಂಗ್ರೆಸ್ನಿಂದ ಸ್ಪರ್ಧಿಸಲು ಆಕಾಂಕ್ಷಿಯಾಗಿ ಟಿಕೆಟ್ ಕೇಳಿದ್ದೆ. ಆದರೆ ಕಾಂಗ್ರೆಸ್ನ ಸ್ಥಳೀಯ ಮುಖಂಡರು ನನ್ನನ್ನು ಕಡೆಗಣಿಸುತ್ತಲೇ ಬಂದಿದ್ದಾರೆ ಎಂದು ಸುದ್ದಿಗಾರರೊಂದಿಗೆ ಅಸಮಾಧಾನ ಹೊರಹಾಕಿದ್ದಾರೆ.
ವಾರ್ಡ್9 ರಲ್ಲಿ ಕಳೆದ ಎರಡು ಅವಧಿಯಲ್ಲಿ ಮಂಚೇಗೌಡ ಮತ್ತು ವೆಂಕಟೇಶ್ ಅವರಿಗೆ ಅವಕಾಶ ನೀಡಲಾಯಿತು. ಆಗಲೇ ನಾನು ಪಕ್ಷದ ಧೋರಣೆಯನ್ನು ವಿರೋಧಿಸಿ ಜೆಡಿಎಸ್ ಪಕ್ಷ ಸೇರಿದ್ದೆ. ನಂತರ ಡಿ.ಕೆ.ಶಿವಕುಮಾರ್ ಮೂಡಿಗೆರೆಗೆ ಬಂದಿದ್ದಾಗ ಅವರ ನೇತೃತ್ವದಲ್ಲಿ ಮತ್ತೆ ಕಾಂಗ್ರೆಸ್ ಸೇರ್ಪಡೆಗೊಂಡೆ. ಕಳೆದ 6 ತಿಂಗಳಿನಿಂದ ನನ್ನನ್ನೇ ಅಭ್ಯರ್ಥಿ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಕೊನೇ ಗಳಿಗೆಯಲ್ಲಿ ಟಿಕೆಟ್ ತಪ್ಪಿಸಿ ವಂಚಿಸಲಾಯಿತು. ಹೀಗಾಗಿ ನಾನು ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ. ಏಕಾಂಗಿಯಾಗಿ ಹೋರಾಟ ಮಾಡಿದ್ದರೂ ಸಹ 84 ಮತಗಳು ನನಗೆ ಲಭಿಸಿದ್ದು, ಮತದಾರರಿಗೆ ಕೃತಜ್ಞತೆ ತಿಳಿಸುತ್ತೇನೆ ಎಂದಿದ್ದಾರೆ.
ನಿರಂತರವಾಗಿ ಶ್ರಮಿಸಿದ ಕಾರ್ಯಕರ್ತರನ್ನು, ಮುಖಂಡರನ್ನು ಕಡೆಗಣಿಸಿದ್ದರ ಪರಿಣಾಮವೇ ಪಪಂ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲನುಭವಿಸಿದೆ. ವಾರ್ಡ್ 2, 3ರಲ್ಲಿ ಅಲ್ಪಸಂಖ್ಯಾತರು ಬಿಜೆಪಿಗೆ ಮತ ನೀಡಿದ್ದಾರೆ. ಜನರ ಹಿತಾಸಕ್ತಿಯಂತೆ ಆಡಳಿತ ನಡೆಸುವುದು ಮತ್ತು ಪಟ್ಟಣದಲ್ಲಿ ಸಮಗ್ರ ಅಭಿವೃದ್ಧಿಯಾಗಬೇಕೆಂಬುದು ನನ್ನ ಬಯಕೆಯಾಗಿದೆ. ಕಳೆದ 1999ರಿಂದ 2005ರವರೆಗೆ ನಾನು ಪಪಂ ಅಧ್ಯಕ್ಷನಾಗಿದ್ದೆ. ಸ್ಥಾಯಿ ಸಮಿತಿ ಅಧ್ಯಕ್ಷನೂ ಆಗಿದ್ದೆ. ನನ್ನ ಅವಧಿಯಲ್ಲೇ ಅನೇಕ ಅಭಿವೃದ್ಧಿ ಕಾರ್ಯಗಳಾಗಿವೆ. ಪಪಂ ಹೊಸ ಕಟ್ಟಡ ನನ್ನ ಅವಧಿಯಲ್ಲೇ ಆಗಿದೆ ಎಂದು ಹೇಳಿದ್ದಾರೆ.