ಮರೀಚಿಕೆಯಾದ ಮಳೆಹಾನಿ ಪರಿಹಾರ: ದಯಾಮರಣಕ್ಕಾಗಿ ಪ್ರಧಾನಿಗೆ ಪತ್ರ ಬರೆದ ಕೊಡಗಿನ ಸಹೋದರರು
ಮಡಿಕೇರಿ, ಜೂ.17: ಮಳೆಗಾಲ ಆರಂಭವಾಗಿದ್ದರೂ ಕೊಡಗಿನಲ್ಲಿ ಮಳೆಯ ಸುಳಿವಿಲ್ಲ. ಆದರು ಇಂದೋ, ನಾಳೆಯೋ ಮಳೆಯಾಗಿ ಅಪಾಯ ಸಂಭವಿಸಬಹುದು ಎನ್ನುವ ಆತಂಕ ಮಾತ್ರ ಕಳೆದ ವರ್ಷ ಮಳೆಹಾನಿಗೀಡಾದ ಗ್ರಾಮಸ್ಥರನ್ನು ಕಾಡುತ್ತಲೇ ಇದೆ. ಇದಕ್ಕೆ ಪುಷ್ಟಿ ನೀಡುವಂತೆ ಕಾಲೂರು ಗ್ರಾಮದ ನಿಡವಟ್ಟು ಪ್ರದೇಶದ ಇಬ್ಬರು ಸಂತ್ರಸ್ತರು ದಯಾಮರಣಕ್ಕಾಗಿ ಪ್ರಧಾನಮಂತ್ರಿಗಳಿಗೆ ಪತ್ರ ಬರೆದು ಆತಂಕ ಮೂಡಿಸಿದ್ದಾರೆ.
ಕಳೆದ ಆಗಸ್ಟ್ ತಿಂಗಳಿನಲ್ಲಿ ಸುರಿದ ಮಹಾಮಳೆಯಿಂದ ಉಂಟಾದ ಜಲಸ್ಫೋಟ ಮತ್ತು ಗುಡ್ಡ ಕುಸಿತದ ಸಂದರ್ಭ ನಿಡವಟ್ಟು ಗ್ರಾಮದ ಕೆ.ಕೆ.ಜೋಯಪ್ಪ ಹಾಗೂ ಕೆ.ಕೆ.ದುರ್ಯೋಧನ ಅವರಿಗೆ ಸೇರಿದ ಗದ್ದೆ ಮತ್ತು ತೋಟ ಸಂಪೂರ್ಣ ಕೊಚ್ಚಿ ಹೋಗಿತ್ತು. ಪಿತ್ರಾರ್ಜಿತವಾಗಿ ಬಂದಿದ್ದ ಜೋಯಪ್ಪ ಅವರ 2.50 ಎಕರೆ ಕಾಫಿ ತೋಟ, 2 ಎಕರೆ ಗದ್ದೆ ಹಾಗೂ ಸಹೋದರ ಕೆ.ಕೆ.ದುರ್ಯೋಧನ ಅವರಿಗೆ ಸೇರಿದ 2 ಎಕರೆ ಕಾಫಿ ತೋಟ ಮತ್ತು 2 ಎಕರೆ ಗದ್ದೆ ಕೆಸರು, ಮರಳು ತುಂಬಿ ನಾಮಾವಶೇಷವಾಗಿತ್ತು. ಬದುಕಿಗಾಗಿ ಇದ್ದ ಜಮೀನು ನಾಶವಾಗಿದ್ದಲ್ಲದೆ ವಾಸದ ಮನೆಯೂ ಭಾಗಶ: ಹಾನಿಯಾಗಿತ್ತು. ಒಂದಷ್ಟು ದಿನ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದು ಮಳೆ ನಿಂತ ಮೇಲೆ ಮತ್ತೆ ಗ್ರಾಮದಲ್ಲೇ ನೆಲೆ ನಿಂತರು.
ಆದರೆ ಕೆಲವು ತಿಂಗಳುಗಳ ಹಿಂದೆ ಭೂವಿಜ್ಞಾನಿಗಳು ಸ್ಥಳ ಪರಿಶೀಲನೆ ನಡೆಸಿ ನಿಡವಟ್ಟು ಗ್ರಾಮವನ್ನು ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಿತು. ಜಿಲ್ಲಾಡಳಿತ ಘೋಷಿಸಿರುವ 13 ಸೂಕ್ಷ್ಮ ಗ್ರಾಮಗಳಲ್ಲಿ ನಿಡವಟ್ಟು ಗ್ರಾಮ ಕೂಡ ಒಂದಾಗಿದೆ. ಇದೇ ಕಾರಣದಿಂದ ಇತ್ತೀಚೆಗೆ ಕೆಲವು ಅಧಿಕಾರಿಗಳು ಮಳೆಗಾಲದ ಮೂರು ತಿಂಗಳ ಮಟ್ಟಿಗೆ ಗ್ರಾಮವನ್ನು ತೊರೆಯುವಂತೆ ಕೆ.ಕೆ.ಜೋಯಪ್ಪ ಹಾಗೂ ಕೆ.ಕೆ.ದುರ್ಯೋಧನ ಅವರುಗಳಿಗೆ ಸೂಚನೆ ನೀಡಿದ್ದಾರೆ. ಇದರಿಂದ ಆತಂಕಗೊಂಡಿರುವ ಇಬ್ಬರು ಜಿಲ್ಲಾಡಳಿತಕ್ಕೆ ಪತ್ರ ಬರೆದು ನಮಗೆ ಅಧಿಕಾರಿಗಳಿಂದ ಕಿರುಕುಳವಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಅಲ್ಲದೆ ಕಳೆದ ವರ್ಷ ಕಾಫಿ ತೋಟ ಮತ್ತು ಗದ್ದೆ ಕೆಸರಿನಿಂದ ಭೂಗತವಾಗಿದ್ದರೂ ಇಲ್ಲಿಯವರೆಗೆ ಪರಿಹಾರ ನೀಡಿಲ್ಲ. ದುರ್ಯೋಧನ ಅವರಿಗೆ ಕೇವಲ 2,700 ರೂ. ನೀಡಿರುವುದು ಬಿಟ್ಟರೆ ಜೋಯಪ್ಪ ಅವರಿಗೆ ಆದ ನಷ್ಟಕ್ಕೆ ಯಾವುದೇ ಪರಿಹಾರವನ್ನು ನೀಡಿಲ್ಲವೆಂದು ಪತ್ರದಲ್ಲಿ ಆರೋಪಿಸಲಾಗಿದೆ. ನಿಡವಟ್ಟು ಗ್ರಾಮ ಸೂಕ್ಷ್ಮ ಪ್ರದೇಶವೆಂದು ಈ ಹಿಂದೆಯೇ ಮಾಹಿತಿ ಲಭ್ಯವಾಗಿದ್ದರೂ ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳದೆ ಇದೀಗ ಗ್ರಾಮವನ್ನು ತೊರೆಯುವಂತೆ ಒತ್ತಡ ಹೇರುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ನಮಗೆ ಸರಕಾರ ಸೂಕ್ತ ಭೂಮಿಯನ್ನು ನೀಡಿದರೆ ಮತ್ತೆ ಕೃಷಿ ಬದುಕು ಕಟ್ಟಿಕೊಳ್ಳುತ್ತೇವೆ, ಅದು ಬಿಟ್ಟು ಏನನ್ನೂ ನೀಡದೆ ನಮ್ಮ ಬದುಕನ್ನು ಅತಂತ್ರಗೊಳಿಸಿದರೆ ನಮಗೆ ಸಾವೇ ಗತಿ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಹಿಂದೆಯೇ ಮನವಿ ಸಲ್ಲಿಸಿದ್ದರು ಯಾವುದೇ ಸ್ಪಂದನೆ ದೊರೆತ್ತಿಲ್ಲ. ಶಾಸಕರಾಗಲಿ, ಸಂಸದರಾಗಲಿ ನಮ್ಮ ಬಳಿ ಬಂದು ಕನಿಷ್ಠ ಸಾಂತ್ವನವನ್ನು ಹೇಳುವ ಕಾಳಜಿಯನ್ನು ಕೂಡ ತೋರಿಲ್ಲ ಎಂದು ಕೆ.ಕೆ.ಜೋಯಪ್ಪ ಹಾಗೂ ಕೆ.ಕೆ.ದುರ್ಯೋಧನ ಪತ್ರದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಧಾನಮಂತ್ರಿಗಳಿಗೆ ಬರೆದ ಪತ್ರದಲ್ಲಿ ನಮಗೆ ಸೂಕ್ತ ಪರಿಹಾರ ನೀಡಬೇಕು ಅಥವಾ ದಯಾಮರಣಕ್ಕೆ ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಿದ್ದಾರೆ. ಜಿಲ್ಲಾಧಿಕಾರಿಗಳಿಗೆ ಜೂ.4 ರಂದು ಮನವಿ ಸಲ್ಲಿಸಿರುವ ಇವರು ಮುಂದಿನ 15 ದಿನಗಳೊಳಗೆ ಸೂಕ್ತ ಪರಿಹಾರವನ್ನು ನೀಡಿ ಹೊಸ ಬದುಕಿಗೆ ಸಹಕಾರ ನೀಡದಿದ್ದಲ್ಲಿ ಮಡಿಕೇರಿಯ ಗಾಂಧಿ ಮಂಟಪದ ಬಳಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು. ಇದಕ್ಕೂ ಸ್ಪಂದನೆ ದೊರೆಯದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಒಟ್ಟಿನಲ್ಲಿ ಕಣ್ಣಿಗೆ ಕಾಣದ ಸಂತ್ರಸ್ತರ ಗೋಳು ಸ್ಫೋಟಗೊಳ್ಳುತ್ತಲೇ ಇದ್ದು, ಮನೆಗಳ ನಿರ್ಮಾಣ ಕಾರ್ಯದಲ್ಲಿ ಆಸಕ್ತಿ ತೋರುತ್ತಿರುವ ಜಿಲ್ಲಾಡಳಿತ ನೋವಿನಲ್ಲೇ ದಿನ ದೂಡುತ್ತಿರುವ ಸಂತ್ರಸ್ತರ ನೈಜ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯವನ್ನು ತ್ವರಿತವಾಗಿ ಮಾಡಬೇಕಾಗಿದೆ. ಕಳೆದುಕೊಂಡ ಮನೆ ಮತ್ತು ಕೃಷಿಭೂಮಿಗೆ ದಾಖಲೆಯನ್ನು ಕೇಳುತ್ತಾ ಪರಿಹಾರ ನೀಡದೆ ಕಾಲ ಕಳೆಯುವ ಬದಲು ಮಾನವೀಯ ನೆಲೆಗಟ್ಟಿನಲ್ಲಿ ಸೂಕ್ತ ಪರಿಹಾರವನ್ನು ಘೋಷಿಸಬೇಕಾಗಿದೆ. ಜಿಲ್ಲೆಯ ಜನಪ್ರತಿನಿಧಿಗಳು ಕೂಡ ತಮ್ಮ ವಾದ, ಪ್ರತಿವಾದಗಳನ್ನು ಕೇವಲ ಸಭೆಗಳಿಗೆ ಸೀಮಿತಗೊಳಿಸದೆ ಸಂತ್ರಸ್ತರ ಮನೆ ಬಾಗಿಲಿಗೆ ತೆರಳಿ ಕಣ್ಣೀರಿಗೆ ಸ್ಪಂದಿಸುವ ಕಾರ್ಯ ಮಾಡಬೇಕಾಗಿದೆ. ಆತ್ಮಹತ್ಯೆ, ದಯಾಮರಣಗಳಂತಹ ಮಾತುಗಳು ಅತಿರೇಕವಾಗುವ ಮೊದಲು ಆಡಳಿತ ವ್ಯವಸ್ಥೆ ಎಚ್ಚೆತ್ತುಕೊಳ್ಳಬೇಕಾಗಿದೆ ಎಂಬುದು ನಾಗರಿಕರ ಆಗ್ರಹವಾಗಿದೆ.