ಅಧಿಕಾರಿಗಳು ಲಂಚಕ್ಕೆ ಬೇಡಿಕೆಯಿಟ್ಟರೆ ನಿರ್ದಾಕ್ಷಿಣ್ಯ ಕ್ರಮ: ಡಾ.ಜಿ.ಪರಮೇಶ್ವರ್
ತುಮಕೂರು, ಜೂ.23: ರೈತರು ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಸ್ಪಂದಿಸಬೇಕು. ಸಾರ್ವಜನಿಕರ ಕೆಲಸ ಮಾಡಿಕೊಡಲು ಲಂಚದ ಬೇಡಿಕೆಯಿಟ್ಟು, ಅನಗತ್ಯ ವಿಳಂಬ ಮಾಡುವುದು ಕಂಡುಬಂದರೆ ಅಂತಹ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದೆಂದು ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ್ ಎಚ್ಚರಿಕೆ ನೀಡಿದ್ದಾರೆ.
ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ಚಿನ್ನಹಳ್ಳಿ ಗ್ರಾಮ ಪಂಚಾಯತ್ ಬಳಿ ಇಂದು ನಡೆದ ಜನಸಂಪರ್ಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಲಂಚದ ಹಣ ಕೇಳುವ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಹೆದರದೇ ದೂರು ನೀಡಿ. ದೂರು ಸಾಬೀತಾದಲ್ಲಿ ತಪ್ಪದೇ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.
ಸರಕಾರ ಅಸ್ತಿತ್ವಕ್ಕೆ ಬಂದು 2019ರ ಮೇ 24ಕ್ಕೆ ಒಂದು ವರ್ಷ ಪೂರ್ಣಗೊಂಡಿದ್ದು, 2018ರ ಮೇ 21ರಂದು ರಾಜ್ಯದ ಜನತೆಗೆ ಉತ್ತಮ ಆಡಳಿತ ನೀಡುತ್ತೇವೆಂದು ಮುಖ್ಯಮಂತ್ರಿಗಳು ಹಾಗೂ ತಾವು ಪ್ರಮಾಣ ಮಾಡಿದ್ದೆವು. ಅದರಂತೆ ರಾಜ್ಯದಜನತೆ ಏಳಿಗೆ ಗಾಗಿ ಸರಕಾರ ಶ್ರಮಿಸುತ್ತಿದೆ. ಸರಕಾರ ಹಾಗೂ ಅಧಿಕಾರಿಗಳು ಜನೋಪಯೋಗಿ ಯೋಜನೆಗಳ ಅನುಷ್ಠಾನಕ್ಕೆ ಎಷ್ಟೇ ಶ್ರಮಿಸುತ್ತಿದ್ದರೂ ಸಮ್ಮಿಶ್ರ ಸರಕಾರದ ಆಡಳಿತ ವೈಖರಿ ಸಮರ್ಪಕವಾಗಿಲ್ಲ ಎಂದು ವಿರೋಧ ಪಕ್ಷಗಳು ಟೀಕಿಸುತ್ತಾ ಬಂದಿದೆ. ಈ ಸರಕಾರ ಒಂದೇ ವರ್ಷದ ಅವಧಿಯಲ್ಲಿ 2,18,000 ಕೋಟಿ ರೂ. ಹಾಗೂ 2,34,000ಕೋಟಿ ರೂ.ಗಳ ಎರಡು ಆಯ-ವ್ಯಯವನ್ನು ಮಂಡಿಸಿದೆ. ಹಿಂದಿನ ಸರಕಾರದ ಅನ್ನಭಾಗ್ಯ, ಕ್ಷೀರಭಾಗ್ಯ, ನೀರಾವರಿ ಯೋಜನೆ, ರಸ್ತೆ ಅಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ಕೃಷಿ ಸೇರಿದಂತೆ ಹಲವಾರು ಯೋಜನೆಗಳೊಂದಿಗೆ ಮತ್ತಷ್ಟು ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.
ಸರಕಾರದ ಬೊಕ್ಕಸ ಖಾಲಿ ಎನ್ನುವ ಆರೋಪ ಸಲ್ಲದು. ಸರಕಾರದ ಹಣಕಾಸು ಪರಿಸ್ಥಿತಿ ಉತ್ತಮವಾಗಿಯೇ ಇದೆ. ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅನುದಾನದ ಕೊರತೆಯಿದೆ ಎಂದು ರಾಜ್ಯದ ಯಾವ ಅಧಿಕಾರಿಯೂ ಸರಕಾರಕ್ಕೆ ಪ್ರಸ್ತಾವನೆ ನೀಡಿಲ್ಲ. ಆದರೂ ಸರಕಾರದ ಹಣ ಸಮರ್ಪಕವಾಗಿ ವ್ಯಯವಾಗಬೇಕೆನ್ನುವ ಹಾಗೂ ಯೋಜನೆಗಳ ಲಾಭವನ್ನು ಜನರಿಗೆ ತಲುಪಿಸುವ ದೃಷ್ಟಿಯಿಂದ ಜನರ ಸಮಸ್ಯೆಗಳನ್ನು ಮುಕ್ತವಾಗಿ ಆಲಿಸಲು ಮುಖ್ಯಮಂತ್ರಿಗಳು ಗ್ರಾಮವಾಸ್ತವ್ಯ ಹಾಗೂ ತಾವು ಜನಸಂಪರ್ಕ ಸಭೆಗಳನ್ನು ನಡೆಸಲು ನಿರ್ಧರಿಸಿದ್ದೇವೆ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.
ಕೋಲಾರ, ಚಿಕ್ಕಬಳ್ಳಾಪುರ ಹಾಗೂ ತುಮಕೂರು ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದನ್ನು ಮನಗಂಡು ಸರಕಾರವು ಎತ್ತಿನಹೊಳೆ ಯೋಜನೆಯನ್ನು ಪ್ರಾರಂಭಿಸಬೇಕೆಂದು ಸುಮಾರು 13500 ಕೋಟಿ ರೂ.ಗಳನ್ನು ಖರ್ಚು ಮಾಡಲು ಉದ್ದೇಶಿಸಿದೆ. ಪಶ್ಚಿಮಘಟ್ಟದಿಂದ ಸುಮಾರು 300 ಕಿ.ಮೀ. ದೂರದಿಂದ ನೀರು ತರುವ ಈ ಯೋಜನೆಯನ್ನು ಕೈಗೊಳ್ಳಲು ಜನರು ಸಹಕರಿಸಬೇಕು. ನೀರು ತರುವ ಮಾರ್ಗದಲ್ಲಿ ಬರುವ ಎಲ್ಲ ಗ್ರಾಮಗಳಿಗೂ ಕುಡಿಯುವ ನೀರನ್ನು ಒದಗಿಸುವ ಯೋಜನೆ ಇದಾಗಿದೆ. ಇದೇ ಯೋಜನೆಯಡಿ ಭೈರಗೊಂಡ್ಲು ಗ್ರಾಮದ ಕೆರೆಯಲ್ಲಿ ನೀರು ಶೇಖರಣೆ ಮಾಡಿ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಗೆ ಕೊಂಡೊಯ್ಯಲಾಗುವುದು. ಈ ಯೋಜನೆಯನ್ನು ಕಾರ್ಯಗತಗೊಳಿಸಲು ದೊಡ್ಡಬಳ್ಳಾಪುರ ಹಾಗೂ ಕೊರಟಗೆರೆ ತಾಲೂಕುಗಳ ಸುಮಾರು 5000 ಎಕರೆ ಭೂಮಿ ಅಗತ್ಯವಿದ್ದು, ಭೂಸ್ವಾಧೀನಪಡಿಸಿಕೊಳ್ಳಲು 9 ಹಳ್ಳಿಗಳನ್ನು ಸ್ಥಳಾಂತರಿಸಬೇಕಾಗುತ್ತದೆ. ಭೂಸ್ವಾಧೀನದಿಂದ ಬಾಧಿತರಾಗುವ ರೈತರಿಗೆ ಸೂಕ್ತ ಪರಿಹಾರ ಒದಗಿಸಲಾಗುವುದು. ಪರಿಹಾರವನ್ನು ದೊಡ್ಡಬಳ್ಳಾಪುರ ಹಾಗೂ ಕೊರಟಗೆರೆ ತಾಲೂಕಿನ ರೈತರಿಗೆ ಒಂದೇ ತೆರನಾದ ಬೆಲೆ ನಿಗದಿಪಡಿಸಲಾಗಿದೆ. ಈ ಭಾಗದ ರೈತರಿಗೆ ನಷ್ಟವಾಗಲು ನಾನು ಬಿಡುವುದಿಲ್ಲ. ದಯಮಾಡಿ ಎತ್ತಿನ ಹೊಳೆ ಯೋಜನೆಯನ್ನು ಕಾರ್ಯಗತಗೊಳಿಸಲು ಭೂಮಿಯನ್ನು ಬಿಟ್ಟುಕೊಡಬೇಕೆಂದು ಮನವಿ ಮಾಡಿದರು.
ಎತ್ತಿನಹೊಳೆ ಯೋಜನೆಗೆ ಬಿಡುಗಡೆಯಾಗಿರುವ 13500 ಕೋಟಿ ರೂ.ಗಳಲ್ಲಿ ಸಕಲೇಶಪುರದ ಬಳಿ ನೀರು ಸಂಗ್ರಹಣೆ ಹಾಗೂ ಕಾಲುವೆ ನಿರ್ಮಾಣಕ್ಕಾಗಿ ಸುಮಾರು 6500ಕೋಟಿ ರೂ.ಗಳನ್ನು ಈಗಾಗಲೇ ಖರ್ಚು ಮಾಡಲಾಗಿದೆ. ಈ ಯೋಜನೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಿದಲ್ಲಿ ಈ ಭಾಗದ 34 ಕೆರೆಗಳನ್ನು ತುಂಬಿಸಿಕೊಳ್ಳಲು ಅನುವಾಗುವುದಲ್ಲದೆ ಅಂತರ್ಜಲ ವೃದ್ಧಿಯಾಗುತ್ತದೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ಪಡೆದ ರೈತರ ಸಾಲವನ್ನೂ ಮನ್ನಾ ಮಾಡಲು ನಿರ್ಣಯಿಸಲಾಗಿದೆ. ಇದರಿಂದ ಸುಮಾರು 46000 ಕೋಟಿ ರೂ.ಗಳ ರೈತರ ಸಾಲವನ್ನು ಮನ್ನಾ ಮಾಡಿ ಋಣಮುಕ್ತ ಪತ್ರವನ್ನು ರೈತರ ಮನೆ ಬಾಗಿಲಿಗೆ ತಲುಪಿಸಲಾಗುವುದು. ಪತ್ರ ತಲುಪಿಸುವ ಕೆಲಸವನ್ನು ಮಾಡಲು ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಈ ವರ್ಷದೊಳಗಾಗಿ ಇಡೀ ರಾಜ್ಯದ ರೈತರ ಸಾಲಮನ್ನಾ ಮಾಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದು ಎಂದು ಡಾ.ಜಿ.ಪರಮೇಶ್ವರ್ ಭರವಸೆ ನೀಡಿದರು.
ವೇದಿಕೆಯಲ್ಲಿ ಜಿ.ಪಂ.ಸದಸ್ಯರಾದ ಜಿ.ಆರ್. ಶಿವರಾಮಯ್ಯ, ನಾರಾಯಣಮೂರ್ತಿ, ತಾಲೂಕು ಪಂಚಾಯತ್ ಅಧ್ಯಕ್ಷ ಟಿ.ಸಿ. ರಾಮೇಗೌಡ, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್, ಜಿಲ್ಲಾ ಎಸ್ಪಿ ಕೋನಾ ವಂಶಿಕೃಷ್ಣ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಪ್ರೇಮ್ಕುಮಾರ್, ಶೈಲೇಶ್, ಮಧುಗಿರಿ ಉಪವಿಭಾಗಾಧಿಕಾರಿ ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.