ರಾತ್ರಿ ಮಲಗಿದ್ದವರ ಮೇಲೆ ಕುಸಿದ ಮನೆಯ ಛಾವಣಿ: ಒಂದೇ ಕುಟುಂಬದ ಆರು ಮಂದಿ ಮೃತ್ಯು
ಬೀದರ್, ಜೂ.26: ಮನೆಯೊಂದರ ಮೇಲ್ಛಾವಣಿ ಕುಸಿದು ಒಂದೇ ಕುಟುಂಬದ ಆರು ಮಂದಿ ದಾರುಣವಾಗಿ ಮೃತಪಟ್ಟಿರುವ ಘಟನೆ ಬಸವ ಕಲ್ಯಾಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೀದರ್ ಬಸವಕಲ್ಯಾಣ ಪಟ್ಟಣದ ಚಿಲ್ಲಾಗಲ್ಲಿ ಬಡಾವಣೆಯ ನದೀಂ ಶೇಖ್(45), ಫರೀದಾ ಬೇಗಂ(34), ಆಯಿಷಾ ಬಾನು(15), ಮಹೆತಾಬಿ(15), ಫರ್ಹಾನ್ ಅಲಿ(4) ಮತ್ತು ಫಯಾಝ್ಖಾನ್ (6) ಮೃತಪಟ್ಟ ದುರ್ದೈವಿಗಳು. ಇವರು ವಾಸಿಸುತ್ತಿದ್ದ ಮನೆ ನಿರ್ಮಾಣಗೊಂಡು ಹಲವು ದಶಕಗಳೇ ಕಳೆದಿದ್ದು, ಶಿಥಿಲಾವಸ್ಥೆಯಲ್ಲಿತ್ತು. ಅಲ್ಲದೆ ಮನೆಯ ಮೇಲ್ಛಾವಣಿ ಮಣ್ಣಿನಿಂದ ನಿರ್ಮಿಸಲಾಗಿತ್ತು ಎನ್ನಲಾಗಿದೆ.
ಕಳೆದ ಎರಡು ದಿನದಿಂದ ಬೀದರ್ ಹಾಗೂ ಸುತ್ತಮುತ್ತ ಭಾರೀ ಮಳೆಯಾಗಿತ್ತು. ಇದರ ಪರಿಣಾಮ ಮನೆಯ ಮೇಲ್ಛಾವಣಿ ದುರ್ಬಲವಾಗಿದೆ. ಇದರ ಅರಿವಿಲ್ಲದೆ ರಾತ್ರಿ ಮಲಗಿದ್ದ ಇವರ ಮೇಲೆ ಬೆಳಗಿನ ಜಾವ ಮೇಲ್ಛಾವಣಿ ಕುಸಿದಿದ್ದು, ಎಲ್ಲರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಅವಘಡದಿಂದಾಗಿ ಗ್ರಾಮಸ್ಥರು ಆತಂತಕ್ಕೆ ಒಳಗಾಗಿದ್ದಾರೆ. ಘಟನಾ ಸ್ಥಳಕ್ಕೆ ಎಸ್ಪಿ ಟಿ.ಶ್ರೀಧರ್ ಸೇರಿದಂತೆ ಇತರೆ ಪೊಲೀಸ್ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದರು. ಈ ವೇಳೆ ಶಾಸಕ ಬಿ.ನಾರಾಯಣರಾವ್, ತಹಶೀಲ್ದಾರ್ ಸಾವಿತ್ರಿ ಸಲಗರ ಸ್ಥಳಕ್ಕೆ ಭೇಟಿ ನೀಡಿ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರು.