ಕಿಸಾನ್ ಸಮ್ಮಾನ್ ನಿಧಿ ಯೋಜನೆ: ರಾಜ್ಯದಲ್ಲಿ ಶೇಖಡ ಅರ್ಧದಷ್ಟೂ ಆಗದ ನೋಂದಣಿ !
ಸಾಂದರ್ಭಿಕ ಚಿತ್ರ
ಬೆಂಗಳೂರು, ಜು.3: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ರಾಜ್ಯದ ಶೇಖಡ ಅರ್ಧದಷ್ಟು ರೈತರು ನೋಂದಣಿ ಮಾಡಿಕೊಂಡಿಲ್ಲ. ನೋಂದಣಿಯಾದವರ ಪೈಕಿ ಧಾರವಾಡದಲ್ಲಿ ಅಧಿಕ ಸಂಖ್ಯೆಯಿದ್ದು, ಬೆಂಗಳೂರಿನಲ್ಲಿ ಕಡಿಮೆ ಸಂಖ್ಯೆಯ ರೈತರಿದ್ದಾರೆ.
ಕೇಂದ್ರ ಸರಕಾರ ಚುನಾವಣಾ ಪೂರ್ವದಲ್ಲಿ ರೈತರಿಗೆ ಈ ಯೋಜನೆಯನ್ನು ಪರಿಚಯಿಸಿ, ವಾರ್ಷಿಕವಾಗಿ 6 ಸಾವಿರ ರೂ.ಗಳನ್ನು ನಾಲ್ಕು ತಿಂಗಳಿಗೊಮ್ಮೆ 2 ಸಾವಿರ ರೂ.ಗಳು ರೈತರ ಖಾತೆಗೆ ನೇರ ಜಮೆ ಮಾಡಲಾಗುತ್ತದೆ. ಆದರೆ, ರೈತರು ಈ ಯೋಜನೆ ಸೌಲಭ್ಯ ಪಡೆಯಲು ಮುಂದಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಯೋಜನೆ ಅಡಿಯಲ್ಲಿ ನೋಂದಣಿ ಮಾಡಿಸಿಕೊಳ್ಳುವಂತೆ ರಾಜ್ಯಾದ್ಯಂತ ಅಧಿಕಾರಿಗಳು ಮನೆ ಮನೆಗೆ ಹೋಗಿ ಮನವಿ ಮಾಡಿದ್ದರೂ ನೋಂದಣಿಗೆ ಮುಂದಾಗಿಲ್ಲ. ಬಹುತೇಕರು ಆಧಾರ್ ಕಾರ್ಡ್ನೊಂದಿಗೆ ಜೋಡಣೆ ಮಾಡಿರುವುದರಿಂದ ಈ ಯೋಜನೆ ಅಡಿಯಲ್ಲಿ ನೋಂದಣಿ ಮಾಡಿಸಿಕೊಳ್ಳಲು ಆಸಕ್ತಿ ತೋರಿಸುತ್ತಿಲ್ಲ ಎಂದೂ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಅವಧಿ ವಿಸ್ತರಣೆ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ನೋಂದಣಿಗೆ ಜೂ.30 ರಂದು ಕೊನೆಯ ದಿನಾಂಕವಾಗಿತ್ತು. ಆದರೆ, ಇದುವರೆಗೂ ಅರ್ಧದಷ್ಟು ರೈತರು ನೋಂದಣಿಗೆ ಮುಂದಾಗದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಒಂದು ವಾರ ಅವಧಿ ವಿಸ್ತರಣೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಎಲ್ಲೆಲ್ಲಿ ಎಷ್ಟು ನೋಂದಣಿ(ಶೇಖಡವಾರು): ಬೆಂಗಳೂರು ನಗರ 29.08, ಬೆಂಗಳೂರು ಗ್ರಾಮಾಂತರ 41.16, ಕೋಲಾರ 30.37, ಚಿಕ್ಕಬಳ್ಳಾಪುರ 36.34, ತುಮಕೂರು 45.55, ರಾಮನಗರ 32.48, ಮಂಡ್ಯ 36.34, ಮೈಸೂರು 35.40, ಚಾಮರಾಜನಗರ 37.05, ಕೊಡಗು 35.35, ಹಾಸನ 40.57, ದಕ್ಷಿಣ ಕನ್ನಡ 49.73, ಚಿಕ್ಕಮಗಳೂರು 47.48, ಉಡುಪಿ 50.69, ಶಿವಮೊಗ್ಗ 53.55, ದಾವಣಗೆರೆ 58.24, ಚಿತ್ರದುರ್ಗ 52.73, ಉತ್ತರ ಕನ್ನಡ 64.80 ರಷ್ಟು ರೈತರು ನೋಂದಾಯಿಸಿಕೊಂಡಿದ್ದಾರೆ.
ಇನ್ನುಳಿದಂತೆ ಉತ್ತರ ಕರ್ನಾಟಕ ಭಾಗದಲ್ಲಿನ ಕಲಬುರಗಿ 51.54, ಬೀದರ್ 53.60, ರಾಯಚೂರು 59.69, ಯಾದಗಿರಿ 35.94, ಬಳ್ಳಾರಿ 40.96, ಹಾವೇರಿ 60.03, ಕೊಪ್ಪಳ 61.51, ವಿಜಯಪುರ 61.53, ಬಾಗಲಕೋಟೆ 65.73, ಗದಗ 69.96, ಬೆಳಗಾವಿ ಶೇ.71.43 ಹಾಗೂ ಧಾರವಾಡದಲ್ಲಿ ಶೇ.72.26 ರಷ್ಟು ರೈತರು ನೋಂದಣಿ ಮಾಡಿಕೊಂಡಿದ್ದು, ರಾಜ್ಯದಲ್ಲಿಯೇ ಅಧಿಕ ಸಂಖ್ಯೆಯಾಗಿದೆ.