ಚಿಕ್ಕಮಗಳೂರು ಪೊಲೀಸರ ಕಾರ್ಯಾಚರಣೆ: ಆನೆ ದಂತ ಮಾರಾಟಗಾರರ ಬಂಧನ
ಬಂಧಿತರು ಮಂಗಳೂರು, ಬೆಂಗಳೂರು, ಉಡುಪಿ ಮೂಲದವರು
ಚಿಕ್ಕಮಗಳೂರು, ಜು.11: ಆನೆ ದಂತ ಮಾರಾಟಗಾರರ ಗುಂಪೊಂದರ 7 ಮಂದಿ ಸದಸ್ಯರನ್ನು ಜಿಲ್ಲಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಬಂಧಿತರಿಂದ 2 ಆನೆ ದಂತಗಳು ಹಾಗೂ ಎರಡು ಕಾರುಗಳನ್ನು ವಶಕ್ಕೆ ಪಡೆದಿರುವ ಘಟನೆ ಗುರುವಾರ ಸಂಜೆ ವರದಿಯಾಗಿದೆ.
ಆನೆ ದಂತ ಮಾರಾಟಗಾರರ ಗುಂಪೊಂದು ಜಿಲ್ಲೆಯಲ್ಲಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಅರಣ್ಯ ಸಂಚಾರಿ ದಳದ ಪೊಲೀಸರು ಆಲ್ದೂರು ಠಾಣೆಯ ಪಿಎಸೈ ಸುನಿಲ್ಕುಮಾರ್ ಹಾಗೂ ಠಾಣೆಯ ಸಿಬ್ಬಂದಿ ನೇತೃತ್ವದ ಪೊಲೀಸರ ತಂಡ ಗುರುವಾರ ಸಂಜೆ ವೇಳೆ ಜಿಲ್ಲೆಯ ಮಲೆನಾಡು ವ್ಯಾಪ್ತಿಯಲ್ಲಿರುವ ಡಾಬಾವೊಂದರಲ್ಲಿ ಮೇಲೆ ದಾಳಿ ಮಾಡಿದೆ. ಈ ವೇಳೆ ಆರೋಪಿಗಳಿಗೆ ಸೇರಿದ ಕಾರಿನಲ್ಲಿದ್ದ 2 ಆನೆ ದಂತಗಳು ಹಾಗೂ ಎರಡೂ ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣ ಸಂಬಂಧ ಎರಡು ಕಾರುಗಳಲ್ಲಿದ್ದ ಬೆಂಗಳೂರು, ಮಂಗಳೂರು ಹಾಗೂ ಉಡುಪಿ ಮೂಲದ 7 ಮಂದಿಯನ್ನು ಬಂಧಿಸಿದ್ದಾರೆಂದು ತಿಳಿದು ಬಂದಿದೆ.
ಬಂಧಿತ ಆರೋಪಿಗಳನ್ನು ಮಂಗಳೂರು ಮೂಲದವರಾದ ಸಂತೋಷ್, ರಂಜಿತ್, ಮುಹಮ್ಮದ್ ಆಸಿಫ್, ಮುಹಮ್ಮದ್ ಅಶ್ರಫ್, ಬೆಂಗಳೂರಿನ ಜಗದೀಶ್, ಉಡುಪಿಯ ಗಣೇಶ್, ಸುರೇಶ್ ಎಂದು ಗುರುತಿಸಲಾಗಿದೆ.
ಈ ಆರೋಪಿಗಳಿಗೆ ಶೃಂಗೇರಿಯ ವಿಜಯಾ ಹೆಗ್ಡೆ ಎಂಬ ಮಹಿಳೆ ಆನೆ ದಂತಗಳನ್ನು ಮಾರಾಟ ಮಾಡಲು ನೀಡಿದ್ದಾರೆಂದು ಬಂಧಿತರು ವಿಚಾರಣೆ ವೇಳೆ ತಿಳಿಸಿದ್ದಾರೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ ಮಾಹಿತಿ ನೀಡಿದ್ದಾರೆ. ಪ್ರಕರಣ ಸಂಬಂಧ ತನಿಖೆ ಮುಂದುವರಿದಿದ್ದು, ಹೆಚ್ಚಿನ ಮಾಹಿತಿ ತನಿಖೆಯಿಂದ ತಿಳಿದುಬರಬೇಕಿದೆ.