ರಾಜ್ಯಾದ್ಯಂತ 70 ಸಾವಿರ ಮಕ್ಕಳು ಶಾಲೆಯಿಂದ ಹೊರಗೆ: ಮಾಹಿತಿ ವರದಿ ನೀಡಲು ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ
ಸಾಂದರ್ಭಿಕ ಚಿತ್ರ
ಬೆಂಗಳೂರು, ಜು.23: ಶಾಲೆಯಿಂದ ಹೊರಗುಳಿದಿರುವ ಸುಮಾರು 70 ಸಾವಿರ ಮಕ್ಕಳನ್ನು ಶಾಲೆಗೆ ಕರೆತರುವ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಮಾಹಿತಿ ವರದಿ ಸಲ್ಲಿಸಲು ನಿರ್ದೇಶಿಸಿದೆ.
ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ್ ಮತ್ತು ನ್ಯಾಯಮೂರ್ತಿ ಎಚ್.ಟಿ.ನರೇಂದ್ರಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಮಕ್ಕಳ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿಯಲ್ಲಿ 6 ರಿಂದ 14ವರ್ಷದವರೆಗೆ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕು. ಆದರೆ, ಸದ್ಯ ರಾಜ್ಯದಲ್ಲಿ ಸುಮಾರು 70 ಸಾವಿರ ಮಕ್ಕಳು ಶಾಲೆಯಿಂದ ಹೊರಗಿದ್ದಾರೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಸರಕಾರಿ ಶಾಲೆಯ ಹೆಡ್ಮಾಸ್ಟರ್ಗಳು ಮಕ್ಕಳ ಪೋಷಕರಿಗೆ ನೋಟಿಸ್ ಜಾರಿಗೊಳಿಸಿ ಮಕ್ಕಳು ಶಾಲೆಗೆ ಯಾಕೆ ಬರುತ್ತಿಲ್ಲ ಎಂಬ ಬಗ್ಗೆ ವಿವರಣೆ ಕೇಳಬೇಕು. ಹಾಜರಿ ಪುಸ್ತಕ ನಿರ್ವಹಣೆ ಮಾಡುವವರು ಇದರ ಬಗ್ಗೆ ಗಮನ ಕೊಡಬೇಕು ಎಂದು ನ್ಯಾಯಪೀಠವು ಸಕ್ಷಮಪ್ರಾಧಿಕಾರಗಳಿಗೆ ಮಧ್ಯಂತರ ಆದೇಶ ನೀಡಿತು.
ಮಕ್ಕಳನ್ನು ಶಾಲೆಗೆ ಮರಳಿ ಕರೆ ತರುವ ಸಂಬಂಧ 2016ರಲ್ಲಿ ಜಾರಿಗೆ ಬಂದಿರುವ ನೀತಿಯನ್ನು ಮುಂದುವರೆಸುತ್ತಿರೋ ಅಥವಾ 2019ರಲ್ಲಿ ಜಾರಿಗೆ ತರುತ್ತಿರುವ ನೀತಿಯನ್ನು ಜಾರಿಗೊಳಿಸುತ್ತಿರೋ ಎಂಬುದನ್ನು ನ್ಯಾಯಪೀಠಕ್ಕೆ ವಿವರಣೆ ನೀಡಬೇಕೆಂದು ನ್ಯಾಯಪೀಠವು ತಿಳಿಸಿತು. ಅಲ್ಲದೆ, ವಿಚಾರಣೆಯನ್ನು ಮುಂದೂಡಿತು.