ಕೇಂದ್ರ ಸರಕಾರದಿಂದ ರಾಜ್ಯಪಾಲರ ಕಚೇರಿ ದುರ್ಬಳಕೆ: ಸಿಪಿಎಂ
ಬೆಂಗಳೂರು, ಜು.26: ಕೇಂದ್ರ ಸರಕಾರವು ರಾಜ್ಯಪಾಲರ ಕಚೇರಿಯನ್ನು ದುರ್ಬಳಕೆ ಮಾಡಿಕೊಂಡು ಬಹುಮತವಿಲ್ಲದೇ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಮಾಡಲು ಮುಂದಾಗಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ(ಸಿಪಿಎಂ) ಆಕ್ಷೇಪ ವ್ಯಕ್ತಪಡಿಸಿದೆ.
ನಿರಂತರವಾಗಿ ಬಿಜೆಪಿ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಲೇ ಅಕ್ರಮವಾಗಿ ಅಧಿಕಾರ ಹಿಡಿಯಲು ಮುಂದಾಗುತ್ತಿರುವುದು ಪ್ರಜಾಪ್ರಭುತ್ವದ ವಿರೋಧಿ ನೀತಿಯಾಗಿದೆ. ಅಲ್ಲದೆ, ರಾಜ್ಯಪಾಲ ವಜೂಭಾಯಿ ವಾಲಾ ಬಹುಮತಕ್ಕೆ ಅಗತ್ಯವಿರುವಷ್ಟು ಸಂಖ್ಯಾಬಲವಿಲ್ಲ ಎಂದು ತಿಳಿದಿದ್ದರೂ ಯಡಿಯೂರಪ್ಪಗೆ ಸರಕಾರ ರಚನೆಗೆ ಅವಕಾಶ ನೀಡಿರುವುದು ಅಕ್ಷಮ್ಯವಾಗಿದೆ ಎಂದು ಟೀಕಿಸಿದೆ.
ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಗುರುವಾರ ಸಂಜೆ ಮೂರು ಜನ ಶಾಸಕರನ್ನು ಅನರ್ಹ ಮಾಡಿದ್ದು, ಇದೀಗ ಇರುವ ಶಾಸಕರಲ್ಲಿ ಸರಕಾರ ರಚನೆಗೆ ಬಹುಮತಕ್ಕಾಗಿ 112 ಸಂಖ್ಯೆ ಬೇಕಿದೆ. ಆದರೆ, ಬಿಜೆಪಿಯ 105 ಶಾಸಕರಿದ್ದರೂ, ಸರಕಾರ ರಚನೆಗೆ ಅವಕಾಶ ನೀಡಿದ್ದಲ್ಲದೇ, ಬಹುಮತ ಸಾಬೀತುಪಡಿಸಲು ಒಂದು ವಾರ ಸಮಯ ನೀಡಿರುವುದು ಸರಿಯಲ್ಲ ಎಂದು ಸಿಪಿಎಂ ಹೇಳಿದೆ.
ಯಡಿಯೂರಪ್ಪ ಬಳಿ ಬಹುಮತ ಸಾಬೀತು ಪಡಿಸಲು ಸಾಕಷ್ಟು ಶಾಸಕರ ಕೊರತೆಯಿದ್ದು, ಅವರನ್ನು ಎಲ್ಲಿಂದ ತರಲಿದ್ದಾರೆ ಎಂಬುದು ಪ್ರಶ್ನೆಯಾಗಿದ್ದು, ಬಿಜೆಪಿ ಮತೊಮ್ಮೆ ಅಕ್ರಮದಲ್ಲಿ ತೊಡಗಿಸಿಕೊಳ್ಳುವುದರಲ್ಲಿ ಸಂಶಯವಿಲ್ಲ. ಹೀಗಾಗಿ, ರಾಜ್ಯದ ಜನತೆ ಬಿಜೆಪಿಯ ಈ ನಡೆಯನ್ನು ತೀವ್ರವಾಗಿ ಖಂಡಿಸಿ ಪ್ರತಿರೋಧಿಸಬೇಕು ಎಂದು ಸಿಪಿಎಂ ಕರೆ ನೀಡಿದೆ.
ಅನರ್ಹ ಕ್ರಮ ಸ್ವಾಗತಾರ್ಹ: ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಮೂರು ಜನ ಶಾಸಕರನ್ನು ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹ ಮಾಡಿರುವ ಕ್ರಮ ಸ್ವಾಗತಾರ್ಹವಾದುದು. ಪ್ರಜಾಪ್ರಭುತ್ವ ವಿರೋಧಿಯಾದ ಪಕ್ಷಾಂತರವನ್ನು ತಡೆದು ಪ್ರಜಾಸತ್ತೆಯನ್ನು ಬಲ ಪಡಿಸಲು ಇಂತಹ ಕ್ರಮಗಳು ಅಗತ್ಯವಾಗಿವೆ ಎಂದು ಸಿಪಿಎಂ ಪ್ರಕಟನೆ ತಿಳಿಸಿದೆ.