ಮಂಡ್ಯ ವಿವಿಗೆ ಶೀಘ್ರ ಶಂಕುಸ್ಥಾಪನೆ: ಶಾಸಕ ಎಂ.ಶ್ರೀನಿವಾಸ್
ಮಂಡ್ಯ, ಆ.2: ನಗರದ ಸರಕಾರಿ ಮಹಾವಿದ್ಯಾಲಯ(ಸ್ವಾಯತ್ತ) ವಿಶ್ವವಿದ್ಯಾಲಯವಾಗಿದ್ದು, ಸದ್ಯದಲ್ಲೇ ರಾಜ್ಯಪಾಲರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಶಾಸಕ ಎಂ.ಶ್ರೀನಿವಾಸ್ ಹೇಳಿದ್ದಾರೆ.
ನಗರದ ಮಹಿಳಾ ಸರಕಾರಿ(ಸ್ವಾಯತ್ತ) ಕಾಲೇಜಿನ ಆವರಣದಲ್ಲಿ ಆಡಿಟೋರಿಯಂ ಕಟ್ಟಡ ಕಾಮಗಾರಿಗೆ ಶುಕ್ರವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಮಂಡ್ಯ ವಿವಿಗೆ 59 ಕೋಟಿ ರೂ. ಮಂಜೂರು ಮಾಡಿದ್ದು, ಕಟ್ಟಡ ಕಾಮಗಾರಿ ನಡೆಯುತ್ತಿದೆ ಎಂದರು.
ಸರಕಾರಿ ಮಹಾವಿದ್ಯಾಲಯ ವಿಶ್ವವಿದ್ಯಾಲಯ ಆಗುವ ನಿಟ್ಟಿನಲ್ಲಿ ಹೋರಾಟ ಮಾಡಿ, ಕಳೆದ ವಿಧಾನಸಭಾ ಅಧಿವೇಶನದಲ್ಲಿ ಮಸೂದೆ ಮಂಡನೆ ಮಾಡಲಾಗಿದೆ. ರಾಜ್ಯಪಾಲರ ಅಂಕಿತ ಆಗಿದ್ದು, ಮಂಡ್ಯ ನಗರ ಸರಕಾರಿ ವಿಶ್ವವಿದ್ಯಾಲಯ ಆಗಿ ಘೋಷಣೆಯಾಗಿ ಕಾರ್ಯರೂಪಕ್ಕೆ ಬಂದು ಆಡಳಿತಾಧಿಕಾರಿಯನ್ನು ನೇಮಕ ಮಾಡಲಾಗಿದೆ ಎಂದು ಅವರು ಹೇಳಿದರು.
ಮಹಿಳಾ ಕಾಲೇಜಿಗೂ ಸಕಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ 11 ಕೋಟಿ ರೂ. ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು, ಈಗಾಗಲೇ 6 ಕೋಟಿ ರೂ. ಮಂಜೂರಾಗಿದೆ. 2 ಕೋಟಿ ರೂ. ವೆಚ್ಚದಲ್ಲಿ ಆಡಿಟೋರಿಯಂ ನಿರ್ಮಾಣ ಕಾಮಗಾರಿಗೆ ಇಂದು ವಿದ್ಯುಕ್ತವಾಗಿ ಶಿಲಾನ್ಯಾಸ ನೆರವೇರಿಸಲಾಗಿದೆ ಎಂದು ಅವರು ತಿಳಿಸಿದರು.
ಜಿಪಂ. ಸದಸ್ಯೆ ರಾಣಿ ಸಿದ್ದರಾಜು, ಪ್ರಾಂಶುಪಾಲ ಪ್ರೊ.ನಾರಾಯಣ್, ಪ್ರೊ.ಸತ್ಯನಾರಾಯಣ್, ಗುತ್ತಿಗೆದಾರ ಎಂ.ಸೆಂಥಿಲ್ ಕುಮಾರ್ ಇತರರು ಹಾಜರಿದ್ದರು.